ಕೋಲಾರ: ಶಿಕ್ಷಣವು ಕೇವಲ ಅಕ್ಷರ ಹಾಗೂ ಕೌಶಲಾಭಿವೃದ್ದಿಗೆ ಸೀಮಿತವಾಗದೇ ಮಾನವೀಯ ಮೌಲ್ಯಗಳನ್ನು ಕಲಿಸುವಂತಾದರೆ ಮಾತ್ರ ಸುಂದರ, ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಮುದ್ದೇನಹಳ್ಳಿಯ ಮಾನವಾಭ್ಯುದಯ ವಿಶ್ವವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಉತ್ತರ ವಿ.ವಿ ವ್ಯಾಪ್ತಿಯಲ್ಲಿ ಕಾಲೇಜುಗಳ ಶಿಕ್ಷಣದಲ್ಲಿ ಮಾನವೀಯ ಮೌಲ್ಯ ಅಳವಡಿಸುವ ಕುರಿತಂತೆ ಒಡಂಬಡಿಕೆ ಮಾಡಿಕೊಂಡು ಅವರು ಮಾತನಾಡಿದರು.
ಆಧುನಿಕತೆ, ತಂತ್ರಜ್ಞಾನದ ಅಭಿವೃದ್ದಿಯಾಗುತ್ತಿದ್ದಂತೆ ಸುಶಿಕ್ಷಿತರೂ ದಾರಿ ತಪ್ಪಿರುವುದನ್ನು ಕಂಡಿದ್ದೇವೆ, ನಮ್ಮ ಸಂಸ್ಕೃತಿ, ಸಂಸ್ಕಾರ, ಹೆತ್ತವರನ್ನು ಗೌರವಿಸುವ ಮನಸ್ಥಿತಿ ದೂರವಾಗುತ್ತಿದೆ ಎಂದು ವಿಷಾದಿಸಿದರು.
ಹೆತ್ತವರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಸಂಸ್ಕೃತಿ ಹೋಗಬೇಕು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಬರುವಂತಾಗಬೇಕು ಎಂದರು.
ಮುದ್ದೇನಹಳ್ಳಿಯ ಮಾನವಾಭ್ಯುದಯ ವಿಶ್ವವಿದ್ಯಾಲಯದ ಸಂಸ್ಥಾಪಕ ಮಧುಸೂದನ್ ಸಾಯಿ ಸಮ್ಮುಖದಲ್ಲಿ ಪ್ರೊ.ನಿರಂಜನ ವಾನಳ್ಳಿ ಹಾಗೂ ಮಾನವಾಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶ್ರೀಕಂಠ ಒಡಬಂಡಿಕೆ ಮತ್ತು ಒಪ್ಪಂದ ವಿನಿಮಯ ಮಾಡಿಕೊಂಡರು. ಎರಡೂ ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.