ಮುಳಬಾಗಿಲು: ನಂಗಲಿ ಮಸೀದಿ ಪಕ್ಕದ ಸ್ಮಶಾನದ ಕಡೆಯಿಂದ ದೊಡ್ಡ ಕಾಲುವೆಗಳ ಮೂಲಕ ಕೆರೆಯ ನೀರು ಸರಾಗವಾಗಿ ಹರಿಯುತ್ತಿತ್ತು. ಆದರೆ, ಹೆದ್ದಾರಿ ಅಭಿವೃದ್ಧಿ ಸಂದರ್ಭದಲ್ಲಿ ಕೆರೆಯ ಕೋಡಿಯಿಂದ ಹರಿದುಹೋಗುತ್ತಿದ್ದ ದೊಡ್ಡ ಕಾಲುವೆಯನ್ನು ಮುಚ್ಚಿ ಹಾಕಲಾಗಿದೆ. ಇದರಿಂದ ಕೆರೆಯಲ್ಲಿನ ಹೆಚ್ಚುವರಿ ನೀರು ರೈತರ ಜಮೀನುಗಳಿಗೆ ಹರಿಯುತ್ತಿದೆ. ಮುಚ್ಚಿಹೋಗಿರುವ ಕಾಲುವೆಯನ್ನು ಹೆದ್ದಾರಿ ಅಧಿಕಾರಿಗಳು ದುರಸ್ತಿಪಡಿಸಬೇಕು ಎಂದು ರೈತರು ಆಗ್ರಹಿಸಿದರು.
ಮುಳಬಾಗಿಲು ತಾಲ್ಲೂಕಿನ ಮೂಲಕ ಆಂಧ್ರಪ್ರದೇಶದ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ನಂಗಲಿಯ ಸ್ಮಶಾನದ ಪಕ್ಕದ ಹೆದ್ದಾರಿಯ ಉದ್ದಕ್ಕೂ ಇರುವ ದೊಡ್ಡ ಕಾಲುವೆ (ಏಟಿ ಮಾದರಿಯ ಕಾಲುವೆ)ಯಲ್ಲಿ ಕೆರೆಗಳು ತುಂಬಿದರೆ ಎನ್.ವೆಂಕಟಾಪುರ, ಮಲ್ಲೆಕುಪ್ಪ, ಪಟ್ರಹಳ್ಳಿ ಮತ್ತಿತರರ ಸುಮಾರು 10 ಕ್ಕೂ ಹೆಚ್ಚು ಕೆರೆಗಳ ನೀರು ಹರಿದು ನಂಗಲಿ ದೊಡ್ಡ ಏಟಿಗೆ ಸೇರುತ್ತವೆ. ಹೆದ್ದಾರಿ ಪಕ್ಕದಲ್ಲಿ ದೊಡ್ಡ ಕಾಲುವೆ ಇತ್ತು. ಆದರೆ ಸುಮಾರು 20 ವರ್ಷಗಳ ಹಿಂದೆ ಹೆದ್ದಾರಿ ಅಗಲೀಕರಣದ ವೇಳೆ ಗುತ್ತಿಗೆದಾರರು ಕಾಲುವೆಯನ್ನು ಮುಚ್ಚಿದ್ದು, ಕೆರೆಗಳ ಕೋಡಿಯ ನೀರು ರೈತರ ಜಮೀನುಗಳಿಗೆ ಹರಿಯುತ್ತಿದೆ ಎಂದು ರೈತರು ದೂರಿದರು.
ಇದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಟೊಮೆಟೊ, ಹೂವು, ಬಾಳೆ, ಗೆಣಸು ಸೇರಿದಂತೆ ಮತ್ತಿತರ ಬೆಳೆಗಳು ನಾಶವಾಗುತ್ತಿವೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಎನ್. ವೆಂಕಟಾಪುರ ಕೆರೆ ಕೋಡಿ ಹರಿದು, ಸರ್ವೆ ನಂಬರ್ 515ರಿಂದ 528ರವರೆಗಿನ ಸುಮಾರು 14 ರೈತರ ಜಮೀನುಗಳಿಗೆ ನೀರು ನುಗ್ಗಿತ್ತು. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದರು. ಈ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಮಳೆ ಪ್ರಾರಂಭವಾಗಿದ್ದು, ಈ ಹಿಂದಿನ ಸಮಸ್ಯೆ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅಧಿಕಾರಿ ಜಯಕುಮಾರ್ ಹಾಗೂ ಹೆದ್ದಾರಿಯ ನಿರ್ವಹಣಾ ಅಧಿಕಾರಿಯನ್ನು ‘ಪ್ರಜಾವಾಣಿ’ ಸಂಪರ್ಕಿಸಲು ಯತ್ನಿಸಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ವಿ. ಗೀತಾ, ಸ್ಥಳ ಪರಿಶೀಲನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.