ಮುಳಬಾಗಿಲು: ತಾಲ್ಲೂಕಿನಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಆವಣಿ ಬೆಟ್ಟದ ಮೇಲಿನ ಸೀತಾ ಪಾರ್ವತಿ ದೇವಾಲಯವು ಬೀಳುವ ಸ್ಥಿತಿಯಲ್ಲಿದ್ದು, ಪ ದುರಸ್ತಿ ಪಡಿಸಿ ಪೌರಾಣಿಕ ಹಿನ್ನಲೆಯುಳ್ಳ ದೇವಾಲಯವನ್ನು ಉಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಆವಣಿ ಅಥವಾ ಆವಂತಿಕಾ ಕ್ಷೇತ್ರ ಎಂದು ಕರೆಯಲ್ಪಡುವ ಹಾಗೂ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಆವಣಿಯಲ್ಲಿ ರಾಮಲಿಂಗೇಶ್ವರ ದೇವಾಲಯವಿದೆ. ಬೆಟ್ಟದ ಮೇಲೆ ಸೀತೆ ವನವಾಸ ಮಾಡಿದ, ಲವಕುಶರು ಜನಿಸಿದ, ರಾಮ ಹಾಗೂ ಲವಕುಶರ ನಡುವೆ ಯುದ್ಧ ನಡೆದ ಹಾಗೂ ವಾಲ್ಮೀಕಿ ಆಶ್ರಮ ಇದೆ ಎಂಬ ಪೌರಾಣಿಕ ಪ್ರತೀತಿಯುಳ್ಳ ಸೀತಾ ಪಾರ್ವತಿ ದೇವಾಲಯವು ಬೆಟ್ಟದ ಮೇಲಿದೆ. ಈ ದೇವಸ್ಥಾನದ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿದೆ. ಮಳೆ ಬಂದರೆ, ದೇವಸ್ಥಾನದ ಮೇಲ್ಚಾವಣಿ ಸೋರುತ್ತದೆ.
ದೇವಾಲಯದ ಒಳಗಿನ ಮೇಲ್ಚಾವಣಿಯ ಬಹುತೇಕ ಭಾಗವು ಮಳೆಯಿಂದ ತೇವಗೊಂಡಿದೆ. ಪ್ರತಿವರ್ಷ ರಾಮ ನವಮಿಗೆ ಆವಣಿಯಲ್ಲಿ ರಥೋತ್ಸವ ಹಾಗೂ ದೊಡ್ಡ ಮಟ್ಟದ ದನದ ಜಾತ್ರೆ ನಡೆಯುತ್ತದೆ. ಅದಕ್ಕೂ ಮುನ್ನವೇ ದೇವಾಲಯವನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥ ವಿ. ಶರಣ್ ಎಂಬುವರು ಒತ್ತಾಯಿಸಿದರು.
ಈ ಸಂಬಂದ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕಿನ ಜನಪ್ರತಿನಿಧಿಗಳು, ಪ್ರವಾಸೋದ್ಯಮ ಹಾಗೂ ಮುಜರಾಯಿ ಇಲಾಖೆ ಗಮನಕ್ಕೂ ತರಲಾಗಿದೆ ಎಂದು ಸ್ಥಳೀಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.