ಕೋಲಾರ: ‘ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್ಇಪಿ) ಅನುಭವಾತ್ಮಕ ಕಲಿಕೆ, ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆ ಹಾಗೂ ಅವರನ್ನು ಸ್ವಾವಲಂಬಿ ವ್ಯಕ್ತಿಗಳಾಗಿ ರೂಪಿಸುವ ಘನ ಉದ್ದೇಶ ಹೊಂದಿದೆ’ ಎಂದು ಡಯಟ್ ಪ್ರಭಾರ ಪ್ರಾಂಶುಪಾಲ ಟಿ.ಕೆ.ರಾಘವೇಂದ್ರ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಅಂಶಗಳ ಕುರಿತು ಶಿಕ್ಷಕರು ಹಾಗೂ ಶಿಕ್ಷಣೆ ಇಲಾಖೆ ಅಧಿಕಾರಿಗಳಿಗೆ ಇಲ್ಲಿ ಶುಕ್ರವಾರ ಆನ್ಲೈನ್ ಮೂಲಕ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವೆಬಿನಾರ್ ಉದ್ಘಾಟಿಸಿ ಮಾತನಾಡಿ, ‘ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದು ಸ್ವಾವಲಂಬಿ ಬದುಕು ರೂಪಿಸುವ ಕೌಶಲ ಬೆಳೆಸುವ ಗುರಿಯಿದೆ’ ಎಂದು ತಿಳಿಸಿದರು.
‘ಹೊಸ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಅಂಶಗಳ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳಿಗೆ ಸಮರ್ಪಕ ಮಾಹಿತಿ ಮತ್ತು ಅರಿವು ಅಗತ್ಯ. ಅನುಷ್ಠಾನಕ್ಕೆ ಇಲಾಖೆ, ಶಿಕ್ಷಕರು ಸಜ್ಜಾಗಬೇಕು. ಕಾಲಕಾಲಕ್ಕೆ ಶಿಕ್ಷಣದಲ್ಲಿ ಆಧುನಿಕತೆ, ತಂತ್ರಜ್ಞಾನದ ಅಳವಡಿಕೆ ಅಗತ್ಯ’ ಎಂದು ಸಲಹೆ ನೀಡಿದರು.
‘ಕಲಿವಿನ ಮೌಲ್ಯಮಾಪನ ಕ್ರಮಗಳು ಬದಲಾಗಿ, ಮಕ್ಕಳ ಸಾಮರ್ಥ್ಯ, ಅನುಭವ ಹಾಗೂ ಗಳಿಸಿದ ಕೌಶಲಗಳನ್ನು ವಿವಿಧ ಕ್ರಮಗಳ ಮೂಲಕ ಈ ನೀತಿಯಲ್ಲಿ ನಿರ್ಧರಿಸಲಾಗುತ್ತದೆ. ಅರಬಿಂದೊ ಸೊಸೈಟಿಯವರು ರಾಷ್ಟ್ರದೆಲ್ಲೆಡೆ ಶಿಕ್ಷಕರಿಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವೆಬಿನಾರ್ ಸರಣಿ ನಡೆಸಿ ನೀತಿ ಅನುಷ್ಠಾನದಲ್ಲಿ ಶಿಕ್ಷಕರು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ’ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಿಲ್ಲಾ ನೋಡಲ್ ಅಧಿಕಾರಿ ಎಚ್.ಎಸ್.ಚಂದ್ರಕಲಾ, ಡಯಟ್ ಉಪನ್ಯಾಸಕರು, ಶಿಕ್ಷಕರು, ಶಿಕ್ಷಣಾಧಿಕಾರಿಗಳು ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.