ಕೋಲಾರ: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಓದುಗರು ಹಾಗೂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ‘ನ್ಯೂಸ್ ಕ್ವಿಜ್’ ಸ್ಪರ್ಧೆಯ ಪ್ರಚಾರಾಂದೋಲನಕ್ಕೆ ಇಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಪ್ರಚಾರದ ವಾಹನಕ್ಕೆ ಹಸಿರು ನಿಶಾನೆ ತೋರಿದ ನಗರಸಭೆ ಆಯುಕ್ತ ಆರ್.ಶ್ರೀಕಾಂತ್, ‘ಮುದ್ರಣ ಮಾಧ್ಯಮದಲ್ಲಿ ಸದಾ ಹೊಸ ಪ್ರಯೋಗ ಮಾಡುತ್ತಾ ಬಂದಿರುವ ‘ಪ್ರಜಾವಾಣಿ’ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ನ್ಯೂಸ್ ಕ್ವಿಜ್ ಕಾರ್ಯಕ್ರಮ ಆರಂಭಿಸುತ್ತಿರುವುದು ಸಂತಸದ ವಿಚಾರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಕೋವಿಡ್ ಕಾರಣದಿಂದ ಮಕ್ಕಳು ಪಠ್ಯಪುಸ್ತಕ ಹಾಗೂ ಪತ್ರಿಕೆ ಓದಿನಿಂದ ವಿಮುಖರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯೂಸ್ ಕ್ವಿಜ್ ಅವರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿ ಪತ್ರಿಕೆ ಓದಿಸಲು ಪ್ರೇರೇಪಿಸಲಿದೆ. ಬಹುಮಾನ ಇದೆ ಎಂದಾಕ್ಷಣ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಜಾಗೃತವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಪ್ರಜಾವಾಣಿ ಪತ್ರಿಕೆಗೆ ಮಹತ್ವದ ಸ್ಥಾನವಿದೆ. ಪತ್ರಿಕೆಯು ಜನಪರ ಕಾಳಜಿ ಹಾಗೂ ಸಾಮಾಜಿಕ ಬದ್ಧತೆಯಿಂದ ಮನೆ ಮಾತಾಗಿದೆ. ಶಾಲಾ ದಿನಗಳಿಂದಲೂ ನಾನು ಪ್ರಜಾವಾಣಿ ಓದುಗ. ಪತ್ರಿಕೆಯಲ್ಲಿನ ವರದಿಗಳು ಇಂದಿಗೂ ಜನರ ಮೆಚ್ಚುಗೆ ಪಡೆದಿವೆ ಮತ್ತು ನಂಬಿಕೆ ಗಳಿಸಿವೆ’ ಎಂದು ಹೇಳಿದರು.
‘ಸ್ಪರ್ಧಾತ್ಮಕ ಯುಗದಲ್ಲಿ ಮಾಧ್ಯಮಗಳ ಪಾತ್ರ ಹಿರಿದು. ಪತ್ರಿಕೆ ಓದಿದರೇ ಜ್ಞಾನ ವಿಕಾಸವಾಗುತ್ತದೆ. ಜನರ ಜ್ಞಾನದಾಹ ನೀಗಿಸುವಲ್ಲಿ ಮುದ್ರಣ ಮಾಧ್ಯಮದ ಕೊಡುಗೆ ದೊಡ್ಡದು. ಮುದ್ರಣ ಮಾಧ್ಯಮ ಈಗಲೂ ಪ್ರಾಬಲ್ಯ ಹೊಂದಿದೆ. ಸುದ್ದಿ ವಾಹಿನಿಗಳಲ್ಲಿ ದಿನವಿಡೀ ಸುದ್ದಿಗಳು ಬರುತ್ತಿದ್ದರೂ, ಪತ್ರಿಕೆಯ ವಿಶ್ಲೇಷಣೆಗೆ ತುಂಬ ಮೌಲ್ಯವಿದೆ’ ಎಂದು ತಿಳಿಸಿದರು.
‘ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಪ್ರಥಮಗಳನ್ನು ಸೃಷ್ಟಿಸಿರುವ ಪತ್ರಿಕೆಯು ಈಗ ರಸಪ್ರಶ್ನೆ ಸ್ಪರ್ಧೆ ನಡೆಸುತ್ತಿರುವುದು ಓದುಗರಿಗೆ ಸ್ಫೂರ್ತಿದಾಯಕ ವಿಷಯ. ಪತ್ರಿಕೆಯ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ’ ಎಂದು ಆಶಿಸಿದರು.
ಪ್ರಚಾರದ ವಾಹನವು ಜಿಲ್ಲಾ ಕೇಂದ್ರದ ವಿವಿಧೆಡೆ ಸಂಚರಿಸಿತು. ನಗರಸಭೆ ಕಂದಾಯ ಅಧಿಕಾರಿ ಚಂದ್ರು, ಸಿಬ್ಬಂದಿ ನಟರಾಜ್, ಭುವನೇಶ್ವರಿ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಆರ್.ತ್ಯಾಗರಾಜ್ ಹಾಗೂ ಸಾರ್ವಜನಿಕರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.