ADVERTISEMENT

ಪ್ರತೀಕಾರ ತೀರಿಸಿಕೊಳ್ಳುವಲ್ಲಿ ವಿಫಲ: ಶಾಸಕ ಕೊತ್ತೂರು

ಸಿಂಧೂರ ಕಿತ್ತ ಉಗ್ರರನ್ನು ಹೊಡೆಯಬೇಕಿತ್ತು; ನಿರೀಕ್ಷೆ ಹುಸಿಯಾಗಿದೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:19 IST
Last Updated 16 ಮೇ 2025, 16:19 IST
ಕೊತ್ತೂರು ಮಂಜುನಾಥ್‌
ಕೊತ್ತೂರು ಮಂಜುನಾಥ್‌   

ಕೋಲಾರ: ‘ಆಪರೇಷನ್ ಸಿಂಧೂರ ಹಾಗೂ ಸೇನೆ ಬಗ್ಗೆ ನಾನು ಯಾವತ್ತೂ ಹಗುರವಾಗಿ ಮಾತನಾಡಿಲ್ಲ. ಆದರೆ, ಆಪರೇಷನ್ ಸಿಂಧೂರ ನಿರೀಕ್ಷಿಸಿದಷ್ಟು ಸಮಾಧಾನ ತಂದಿಲ್ಲ, ಮಹಿಳೆಯರ ಸಿಂಧೂರ ಕಸಿದ ನಿರ್ದಿಷ್ಟ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವಲ್ಲಿ ದೇಶ ವಿಫಲವಾಗಿದೆ ಎಂಬುದಾಗಿ ಹೇಳಿದ್ದೇನೆ’ ಎಂದು ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್ ಸ್ಪಷ್ಟನೆ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಸೇನೆ ಬಲಿಷ್ಠವಾಗಿದೆ, ಜನಸಂಖ್ಯೆಯಲ್ಲಿ ಹಾಗೂ ಪ್ರತಿಭೆಯಲ್ಲೂ ಕೂಡ ಬಲಿಷ್ಠವಾಗಿದ್ದೇವೆ. ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ಭಾರತದ ಜನ ಕೆಲಸ ಮಾಡುತ್ತಿದ್ದಾರೆ. ಇಂತಹ ಶಕ್ತಿವಂತ ದೇಶದಲ್ಲಿ ಪದೇಪದೇ ದಾಳಿ ನಡೆಯಲು ಹೇಗೆ ಸಾಧ್ಯ? ಪಹಲ್ಗಾಮ್‌ನಲ್ಲಿ ನಮ್ಮ ಮಹಿಳೆಯರು, ಮಕ್ಕಳ ಮುಂದೆಯೇ ಉಗ್ರರು ದಾಳಿ ಮಾಡಿದ್ದಾರೆ. ಇದು ಹೇಗೆ ಸಾಧ್ಯವಾಯಿತು’ ಎಂದು ಪ್ರಶ್ನಿಸಿದರು.

‌‘ಆಪರೇಷನ್‌ ಸಿಂಧೂರ ಸಾರ್ವಜನಿಕರು ಸೇರಿದಂತೆ ಯಾರಿಗೂ ಸಮಾಧಾನ ತಂದಿಲ್ಲ ಎಂಬುದಾಗಿ ಹೇಳಿದ್ದೇನೆ ಅಷ್ಟೆ. ನಾನು ಸೇನೆ ಸೇರಿದಂತೆ ಯಾರ ಮೇಲೂ ಆರೋಪ ಮಾಡಿಲ್ಲ, ಬಿಜೆಪಿಯನ್ನು ಟೀಕಿಸಿಲ್ಲ. ಮನೆಯೊಳಗೆ ನುಗ್ಗಿದ ಕಳ್ಳರನ್ನು ಬಿಟ್ಟಿದ್ದಕ್ಕೆ ಪ್ರಶ್ನಿಸಿದ್ದೇನೆ’ ಎಂದರು.

ADVERTISEMENT

‘ಮಹಿಳೆಯರ ಸಿಂಧೂರ ಕಸಿದ ಉಗ್ರರನ್ನು ಹೊಡೆದು ಹಾಕಬೇಕಿತ್ತು ಎಂಬುದು ನಮ್ಮ ಉದ್ದೇಶವಾಗಿತ್ತು. ಮತ್ತಷ್ಟು ದಾಳಿಯ ನಿರೀಕ್ಷೆ ಇತ್ತು. ಆದರೆ, ಸರಿಯಾಗಿ ಯೋಜನೆ ರೂಪಿಸಿಲ್ಲ. ಈ ನಿಟ್ಟಿನಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ. ನಮ್ಮವರನ್ನು ಕೊಂದ ಉಗ್ರರು ಎಲ್ಲಿ ಹೋದರು ಎಂಬ ಬಗ್ಗೆ ಮಾಹಿತಿ ಇಲ್ಲ. ಇದು ಸಾರ್ವಜನಿಕರ ಪ್ರಶ್ನೆ ಕೂಡ’ ಎಂದು ಹೇಳಿದರು.

‘ಪುಲ್ವಾಮ ದಾಳಿಯಲ್ಲೂ ನಮ್ಮ ಹಲವಾರು ಯೋಧರು ಸತ್ತರು. ಉಗ್ರರು ಕಾರಿನಲ್ಲಿ ಬಂದು ಯೋಧರ ಕಾರಿಗೆ ಗುದ್ದಿದ್ದರು. ಆ ಕಾರಿನಲ್ಲಿ ಆರ್‌ಡಿಎಕ್ಸ್‌ ಇತ್ತು ಎಂಬುದಾಗಿ ಹೇಳುತ್ತಾರೆ. ಅದು ಎಲ್ಲಿಂದ ಬಂತು? ಅದಕ್ಕೆ ಮೂಲ ಯಾವುದು? ಸ್ವಾತಂತ್ರ್ಯ ಬಂದಾಗಿನಿಂದ ಮೂರು, ಆರು, 12 ತಿಂಗಳಿಗೊಮ್ಮೆ ಈ ರೀತಿ ದಾಳಿ ನಡೆಯುತ್ತಿದ್ದರೆ ಇದಕ್ಕೆ ಅಂತ್ಯ ಎಂದು?’ ಎಂದು ಕೇಳಿದರು.

ಪಹಲ್ಗಾಮ್‌ನಲ್ಲಿ ಮಹಿಳೆಯರ ಸಿಂಧೂರ ಕಸಿದ ಉಗ್ರರನ್ನು ಸಾರ್ವಜನಿಕರ ಮುಂದೆ ಹೊಡೆದ ಹಾಕಬೇಕಿತ್ತು ಎಂಬುದು ನಮ್ಮ ಉದ್ದೇಶವಾಗಿತ್ತು. ಅದಕ್ಕೆ ಸೇನೆಗೆ ಮುಕ್ತ ಅವಕಾಶ ಕೊಡಬೇಕು
-ಕೊತ್ತೂರು ಮಂಜುನಾಥ್‌, ಶಾಸಕ

ಕೊತ್ತೂರು ಹೇಳಿಕೆಗೆ ಆಕ್ರೋಶ

‘ಆಪರೇಷನ್‌ ಸಿಂಧೂರ ಹೆಸರಲ್ಲಿ ಅಷ್ಟು ಜನ ಇಷ್ಟು ಜನ ಉಗ್ರರನ್ನು ಹೊಡೆದಿರುವುದಾಗಿ ಕೇಂದ್ರ ಸರ್ಕಾರದವರು ಹೇಳುತ್ತಿದ್ದಾರೆ. ಬೂಟಾಟಿಕೆಗೆ ನಾಲ್ಕು ವಿಮಾನವನ್ನು ಕಳಿಸಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಇಷ್ಟು ಜನರನ್ನು ಹೊಡೆದಿದ್ದಾರೆ ಎಂಬುದು ಇಲ್ಲಿಯವರೆಗೆ ಖಚಿತವಾಗಿಲ್ಲ ಸರಿಯಾಗಿ ಮಾಹಿತಿ ನೀಡಿಲ್ಲ’ ಎಂದು ಟೀಕಿಸಿರುವ ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಮುಖಂಡರು ಅಲ್ಲದೇ; ಸಾಮಾಜಿಕ ಜಾಲತಾಣಗಳಲ್ಲೂ ಟೀಕಾ ಪ್ರಹಾರವೇ ನಡೆಯುತ್ತಿದೆ. ‘ಇಡೀ ಜಗತ್ತು ಭಾರತದ ಶಕ್ತಿ ಬಗ್ಗೆ ಕೊಂಡಾಡುತ್ತಿದೆ. ಆದರೆ ಕಾಂಗ್ರೆಸ್‌ನವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಮತ್ತೆ ಸಾಕ್ಷ್ಯ ಕೇಳುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ. ಕೋಲಾರ ಬಿಜೆಪಿ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌ ಬಿ. ಅವರಿಗೆ ದೂರು ನೀಡಿ ಕೊತ್ತೂರು ಮಂಜುನಾಥ್‌ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.