ADVERTISEMENT

ವೃದ್ಧಾಶ್ರಮ: ಹಣಕಾಸು ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 13:21 IST
Last Updated 23 ಫೆಬ್ರುವರಿ 2020, 13:21 IST
ಮುಸ್ಸಂಜೆ ಮನೆ ವೃದ್ಧಾಶ್ರಮ ನಿರ್ವಹಣೆ ಕುರಿತು ಕೋಲಾರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡರು.
ಮುಸ್ಸಂಜೆ ಮನೆ ವೃದ್ಧಾಶ್ರಮ ನಿರ್ವಹಣೆ ಕುರಿತು ಕೋಲಾರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡರು.   

ಕೋಲಾರ: ‘ಸೇವಾ ಕಾರ್ಯದಲ್ಲಿ ತೊಡಗಿರುವ ಜಾಗೃತಿ ಸೇವಾ ಸಂಸ್ಥೆ ನಡೆಸುತ್ತಿರುವ ವೃದ್ಧಾಶ್ರಮ ಮತ್ತು ಮಕ್ಕಳ ಆಶ್ರಮಕ್ಕೆ ಸಾರ್ವಜನಿಕರು ನೆರವು ನೀಡಿ ವಯೋವೃದ್ಧರು ಹಾಗೂ ಮಕ್ಕಳ ಸೇವೆಗೆ ನೆರವಾಗಬೇಕು’ ಎಂದು ಮುಸ್ಸಂಜೆ ಮನೆ ವೃದ್ಧಾಶ್ರಮದ ಕಾರ್ಯದರ್ಶಿ ಶಾಂತಕುಮಾರಿ ಮನವಿ ಮಾಡಿದರು.

ವೃದ್ಧಾಶ್ರಮದ ನಿರ್ವಹಣೆ ಕುರಿತು ಇಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿ, ‘ವಯೋವೃದ್ಧರ ಸೇವೆಗಾಗಿ ಮುಸ್ಸಂಜೆ ಮನೆ ತೆರೆದಿಯಲಾಗಿದೆ. ಆರ್‌.ವಿ.ಗಾರ್ಡನ್‌ನಲ್ಲಿನ ಹೊಸ ಕಟ್ಟಡಕ್ಕೆ ವೃದ್ಧಾಶ್ರಮ ಸ್ಥಳಾಂತರಿಸಲಾಗಿದೆ. ಹೊಟ ಕಟ್ಟಡದ ಬಾಡಿಗೆ ಕಡಿಮೆಯಿದೆ’ ಎಂದು ತಿಳಿಸಿದರು.

‘ಆಶ್ರಮಕ್ಕೆ ಬರುವ ವೃದ್ಧರ ಸೇವೆಗೆ ಕಟಿಬದ್ಧವಾಗಿದ್ದರೂ ನಿರ್ವಹಣೆ ಸವಾಲು ಎದುರಿಸುವುದು ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಉದಾರ ನೆರವು ಕೋರಲಾಗುತ್ತಿದೆ. ಸಾರ್ವಜನಿಕರು ಆರ್ಥಿಕ ನೆರವು ನೀಡಿದರೆ ವೃದ್ಧಾಶ್ರಮ ನಡೆಸಲು ಅನುಕೂಲವಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ವೃದ್ಧಾಶ್ರಮದ ಸೇವೆ ಪರಿಗಣಿಸಿ ಆಶ್ರಮಕ್ಕೆ ನೀಡುವ ದೇಣಿಗೆಗೆ ತೆರಿಗೆ ಮುಕ್ತಗೊಳಿಸಲಾಗಿದೆ. ರಾಜ್ಯ ಸರ್ಕಾರದಿಂದ ವೃದ್ಧಾಶ್ರಮ ನಿರ್ವಹಣೆಗೆ ತಮ್ಮ ಸಂಸ್ಥೆ ಅರ್ಹವಾಗಿದೆ. ಮುಂದೆ ವಾರ್ಷಿಕ ಅನುದಾನ ದೊರೆಯುವ ಸಾಧ್ಯತೆಯಿದೆ’ ಎಂದು ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಮಾಹಿತಿ ನೀಡಿದರು.

‘ಸರ್ಕಾರದ ನೆರವು ಹಾಗೂ ಸಾರ್ವಜನಿಕರ ಸಹಕಾರದಿಂದ ವೃದ್ಧಾಶ್ರಮದೊಂದಿಗೆ ಮಕ್ಕಳ ಆಶ್ರಮ ತೆರೆಯುವ ಉದ್ದೇಶವಿದೆ. ಈಗಾಗಲೇ ತಂದೆ ಮತ್ತು ತಾಯಿ, ಪೋಷಕರ ನೆರವಿಲ್ಲದ 14 ಮಕ್ಕಳನ್ನು ಆಶ್ರಮಕ್ಕೆ ಗುರುತಿಸಲಾಗಿದೆ’ ಎಂದು ಹೇಳಿದರು.

ಕೈಜೋಡಿಸುತ್ತೇವೆ: ‘ಜಾಗೃತಿ ಸೇವಾ ಸಂಸ್ಥೆಯು ಈವರೆಗೆ ಯಾವುದೇ ಅನುದಾನ ನಿರೀಕ್ಷಿಸದೆ ವೃದ್ಧಾಶ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಮತ್ತಷ್ಟು ವಯೋವೃದ್ಧರಿಗೆ ಸೇವೆ ಮಾಡಲು ಅನುಕೂಲವಾಗುವಂತೆ ಸಾರ್ವಜನಿಕರಿಂದ ಹಣಕಾಸು ನೆರವು ಕ್ರೂಢೀಕರಿಸುವ ಕಾರ್ಯಕ್ಕೆ ಕೈಜೋಡಿಸುತ್ತೇವೆ’ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ಭರವಸೆ ನೀಡಿದರು.

‘ಸ್ಥಳೀಯ ಮುಖಂಡರಲ್ಲದೆ ನರಸಾಪುರ, ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ವೃದ್ಧಾಶ್ರಮಕ್ಕೆ ಹಣಕಾಸು ನೆರವು ಕೊಡಿಸಲು ಪ್ರಯತ್ನಿಸುತ್ತೇವೆ’ ಎಂದು ಬಿಜೆಪಿ ಮುಖಂಡ ವಿ.ಕೆ.ರಾಜೇಶ್ ತಿಳಿಸಿದರು.

ಕೋಲಾರಮ್ಮ ಡ್ರೈವಿಂಗ್ ಶಾಲೆ ಮಾಲೀಕ ಆರ್.ಗೋಪಾಲ್ ವೃದ್ಧಾಶ್ರಮಕ್ಕೆ ಹಣಕಾಸು ನೆರವು ನೀಡಿದರು. ಗೋಕುಲ ಮಿತ್ರ ಬಳಗದ ಸದಸ್ಯ ಮುನಿವೆಂಕಟ ಯಾದವ್ ವೃದ್ಧಾಶ್ರಮಕ್ಕೆ ಪ್ರತಿ ತಿಂಗಳು 2 ಮೂಟೆ ಅಕ್ಕಿ ನೀಡುವುದಾಗಿ ಘೋಷಿಸಿದರು. ಜಾಗೃತಿ ಸೇವಾ ಸಂಸ್ಥೆ ಕಾರ್ಯದರ್ಶಿ ಕವಿತಾ ಹಾಗೂ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.