ಕೋಲಾರ: ತಾಲ್ಲೂಕಿನ ಅರಹಳ್ಳಿ, ದಳಸಗೆರೆ ಗ್ರಾಮಗಳಲ್ಲಿ ತ್ರೈತ ಸಿದ್ಧಾಂತದ ಪ್ರಬೋಧ ಸೇವಾ ಸಮಿತಿಯಿಂದ ಶನಿವಾರ ಭಗವದ್ಗೀತಾ ಜ್ಞಾನ ಗ್ರಂಥಗಳ ಪ್ರಚಾರ ನಡೆಸಲಾಯಿತು.
‘ತ್ರೈತ ಸಿದ್ದಾಂತ ಭಗವದ್ಗೀತಾ ಗ್ರಂಥವು ಶ್ರೀಕೃಷ್ಣನ ನಿಜ ಭಾವವನ್ನು ತಿಳಿಸುತ್ತದೆ. ಪ್ರತಿಯೊಬ್ಬರು ಕರ್ಮ ಯೋಗದ ವಿಶಿಷ್ಟತೆ, ತ್ರೈತ ಸಿದ್ಧಾಂತದ ಸಾರ ತಿಳಿದುಕೊಳ್ಳಬೇಕು. ಈ ಕಾರಣಕ್ಕಾಗಿಯೇ ಭಗವದ್ಗೀತಾ ಪ್ರಚಾರ ಮಾಡುತ್ತಿದ್ದೇವೆ’ ಎಂದು ಸಮಿತಿ ಸದಸ್ಯ ಚಂದ್ರು ತಿಳಿಸಿದರು.
‘ಮೂರು ಆತ್ಮಗಳಾದ ಜೀವಾತ್ಮ, ಆತ್ಮ, ಪರಮಾತ್ಮದ ವಿವರ ತಿಳಿದುಕೊಳ್ಳುವುದೇ ತ್ರೈತ ಸಿದ್ಧಾಂತ. ಭಗವದ್ಗೀತೆಯಲ್ಲಿ ಕರ್ಮ ಯೋಗ, ಬ್ರಹ್ಮ ಯೋಗ, ಭಕ್ತಿ ಯೋಗ ಎಂಬ ದೈವಧರ್ಮಗಳು ಮನುಷ್ಯನನ್ನು ಕರ್ಮದಿಂದ ಹೊರ ಹಾಕಿ ಮುಕ್ತಿ ಕೊಡುತ್ತವೆ. ಭಗವದ್ಗೀತೆಯಲ್ಲಿ ಅಡಗಿರುವ ತ್ರೈತ ಸಿದ್ಧಾಂತ ಇಂದು ಮಧ್ಯಾತ್ಮ ಯೋಗ ಪುರುಷನಿಂದ ಬಹಿರಂಗವಾಗಿದೆ’ ಎಂದರು.
‘ಭಗವದ್ಗೀತೆ ಖರೀದಿಸಿ ಮನೆಯಲ್ಲಿ ಓದುವ ಮೂಲಕ ನಮ್ಮ ಸಂಸ್ಕೃತಿಯ ಅರಿವಿನೊಂದಿಗೆ ಕರ್ಮ, ಜೀವನದ ಮಹತ್ವ ಅರಿಯಬಹುದು. ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬಹುದು. ಭಗವದ್ಗೀತೆಯಲ್ಲಿ ಪುರುಷೋತ್ತಮ ಪ್ರಾಪ್ತಿ ಯೋಗ ಅಧ್ಯಾಯದಲ್ಲಿ 16 ಮತ್ತು 17 ಶ್ಲೋಕಗಳೇ ತ್ರೈತ ಸಿದ್ಧಾಂತಕ್ಕೆ ಆಧಾರ’ ಎಂದು ವಿವರಿಸಿದರು.
ಸಮಿತಿ ಸದಸ್ಯ ಕೋದಂಡರಾಮಪ್ಪ ಮತ್ತು ಗ್ರಾಮಸ್ಥರು ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.