ಕೋಲಾರ: ನಗರದ ವಿವಿಧ ವಾರ್ಡ್ಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯಿಂದ ವಶಪಡಿಸಿಕೊಂಡಿರುವ ಹಣ ಮತ್ತು ಚಿನ್ನಾಭರಣವನ್ನು ವಾಪಸ್ ಮಾಡುವಂತೆ ಒತ್ತಾಯಿಸಿ ಮಿಲ್ಲತ್ ನಗರ ಹಾಗೂ ರಹಮತ್ ನಗರ ನಿವಾಸಿಗಳು ಗಲ್ಪೇಟೆ ಪೊಲೀಸ್ ಠಾಣೆ ಮುಂದೆ ಪಿಎಸ್ಐ ವೇದಾವತಿ ಅವರು ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಪ್ರಶಾಂತ್ ನಗರ, ಸಹಕಾರ ನಗರ, ರಾಜನಗರ, ರಹಮತ್ ನಗರ ಹಾಗೂ ಮಿಲ್ಲತ್ ನಗರದ 18 ಮನೆಗಳಲ್ಲಿ ಕಳ್ಳತನ ಮಾಡಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದ ಆರೋಪಿಯನ್ನು ಗಲ್ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿ ಸುಮಾರು 12 ದಿನಗಳು ಕಳೆದಿವೆ. ಆರೋಪಿಯಿಂದ ವಶಪಡಿಸಿಕೊಂಡಿರುವ ಚಿನ್ನ ಹಾಗೂ ಹಣ ಹಿಂತಿರುಗಿಸುವ ಬಗ್ಗೆ ನಿವಾಸಿಗಳು ಹಲವು ಬಾರಿ ತಿಳಿಸಿದ್ದರೂ ಪಿಎಸ್ಐ ಅವರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ಕಳ್ಳತನವಾದ ಮಧ್ಯರಾತ್ರಿ ನಿವಾಸಿಗಳು ಒಟ್ಟಿಗೆ ಸೇರಿ ನಗರಸಭೆ ಸದಸ್ಯ ಶಫಿ ಅವರ ಮನೆ ಬಳಿ ತೆರಳಿ ಪಿಎಸ್ಐ ಅವರ ದೂರವಾಣಿ ಕರೆ ಮಾಡಿದೆವು. ಆಗ ಅವರ ಪತಿ ಕರೆ ಸ್ವೀಕರಿಸಿ ಬೇಜವಾಬ್ದಾರಿಯಿಂದ ಉತ್ತರ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಹಣ ಮತ್ತು ಚಿನ್ನಾಭರಣ ವಾಪಸ್ ನೀಡುವಂತೆ ಮನವಿ ಮಾಡಿದರೆ ನಮ್ಮ ಮೇಲೆಯೇ ದೌರ್ಜನ್ಯ ನಡೆಸುತ್ತಾರೆ ಎಂದು ಆರೋಪಿಸಿದರು.
ಸ್ಥಳಕ್ಕೆ ವೃತ್ತ ನಿರೀಕ್ಷಕ ಹರೀಶ್ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಪಿಎಸ್ಐ ಹಾಗೂ ಸಿಬ್ಬಂದಿಗಳಿಂದ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂಬ ಬಗ್ಗೆ ನಿವಾಸಿಗಳು ಗಮನಕ್ಕೆ ತಂದರು. ಈ ಬಗ್ಗೆ ಕ್ರಮಕ್ಕೆ ಮೇಲಧಿಕಾರಿಗೆ ಪತ್ರ ಬರೆಯಲಾಗುತ್ತದೆ ಎಂದು ವೃತ್ತ ನಿರೀಕ್ಷಕರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.