ಶ್ರೀನಿವಾಸಪುರ: ಪಟ್ಟಣದ ಹೊರ ವಲಯದ ಪನಸಮಾಕನಹಳ್ಳಿ ಗ್ರಾಮದ ಸಮೀಪ ಕಾಡಿನ ಅಂಚಿನಲ್ಲಿ ರೈಲ್ವೆ ಹಳಿಗಳ ಮಧ್ಯೆ ಸಿಲುಕಿದ್ದ ಅಪರೂಪದ ಆಮೆಯನ್ನು ಶಿಕ್ಷಕರೊಬ್ಬರು ರಕ್ಷಿಸಿದ್ದಾರೆ.
ಪನಸಮಾಕನಹಳ್ಳಿ ಗ್ರಾಮದ ಶಿಕ್ಷಕ ನಾರಾಯಣಸ್ವಾಮಿ ತಮ್ಮ ಸ್ನೇಹಿತರೊಂದಿಗೆ ಶುಕ್ರವಾರ ಬೆಳಿಗ್ಗೆ ರೈಲು ಹಳಿಗಳ ಪಕ್ಕದಲ್ಲಿ ವಾಯುವಿಹಾರಕ್ಕೆ ತೆರಳಿದ್ದಾಗ, ರೈಲು ಹಳಿಗಳ ಮಧ್ಯೆ ಸಿಕ್ಕಿಕೊಂಡು, ಜಲ್ಲಿ ಕಲ್ಲುಗಳ ಮೇಲೆ ನಡೆಯಲು ಕಷ್ಟಪಡುತ್ತಿದ್ದ ಆಮೆಯನ್ನು
ನೋಡಿ, ಎತ್ತಿ ಸಮತಟ್ಟಾದ ಪ್ರದೇಶದಲ್ಲಿನ ಪೊದೆಯೊಂದರ ಕೆಳಗೆ ಬಿಡುವ ಮೂಲಕ ಪ್ರಾಣಿ ದಯೆ ಮೆರೆದಿದ್ದಾರೆ.
‘ಈ ಪ್ರದೇಶದಲ್ಲಿ ಆಗಾಗ ನಕ್ಷತ್ರ ಆಮೆಗಳು ಕಂಡು ಬರುತ್ತವೆ. ಹಾಗೆಯೇ ಕೆರೆಯಲ್ಲಿ ನೀರಾಮೆಗಳು ವಾಸಿಸುತ್ತಿವೆ. ಆದರೆ, ಶುಕ್ರವಾರ ಕಾಣಿಸಿಕೊಂಡ ಆಮೆ ಮಾತ್ರ ಅಪರೂಪದ್ದಾಗಿದೆ. ಹೊಳೆಯುವ ಆಕರ್ಷಕ ಬಣ್ಣದ ಚಿಪ್ಪಿನ ಸುತ್ತ ಬಂಗಾರ ಬಣ್ಣದ ಗೆರೆ, ಅಚ್ಚ ಬಿಳಿ ಬಣ್ಣದಿಂದ ಕೂಡಿರುವ ಹೊಟ್ಟೆ ಭಾಗದಿಂದಾಗಿ ಆಮೆ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತಿತ್ತು’ ಎಂದು ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.