ADVERTISEMENT

ಮುಳಬಾಗಿಲು: ರೌಡಿಗಳ ಪೆರೇಡ್

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 14:12 IST
Last Updated 11 ಡಿಸೆಂಬರ್ 2023, 14:12 IST
ಸಹಾಯಕ ಎಸ್‌ಪಿವಿಬಿ ಭಾಸ್ಕರ್ ನಗರ ಠಾಣೆಯ ಮೈದಾನದಲ್ಲಿ ಮುಳಬಾಗಿಲು ಉಪ ವಿಭಾಗದ ರೌಡಿಗಳನ್ನು ವಿಚಾರಣೆ ಮಾಡಿದರು
ಸಹಾಯಕ ಎಸ್‌ಪಿವಿಬಿ ಭಾಸ್ಕರ್ ನಗರ ಠಾಣೆಯ ಮೈದಾನದಲ್ಲಿ ಮುಳಬಾಗಿಲು ಉಪ ವಿಭಾಗದ ರೌಡಿಗಳನ್ನು ವಿಚಾರಣೆ ಮಾಡಿದರು   

ಮುಳಬಾಗಿಲು: ನಗರದ ಪೊಲೀಸ್ ಠಾಣೆ ಆವರಣದಲ್ಲಿ ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಬಿ.ಭಾಸ್ಕರ್ ಮುಳಬಾಗಿಲು ಉಪ ವಿಭಾಗ ವ್ಯಾಪ್ತಿಯ ರೌಡಿಗಳ ಪೆರೇಡ್ ನಡೆಸಿದರು.

ಮುಳಬಾಗಿಲು ಉಪವಿಭಾಗ ವ್ಯಾಪ್ತಿಯ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ, ನಂಗಲಿ, ರಾಯಲಪಾಡು, ಶ್ರೀನಿವಾಸಪುರ, ಗೌನಿಪಲ್ಲಿ ವ್ಯಾಪ್ತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಒಟ್ಟು 323 ರೌಡಿಗಳಲ್ಲಿ 110 ರೌಡಿಗಳು ಪೆರೇಡ್‌ನಲ್ಲಿ ಭಾಗವಹಿಸಿದ್ದು, 17 ಮಂದಿ ಜೈಲಿನಲ್ಲಿದ್ದಾರೆ. 50 ಮಂದಿ ಹೊರಿಗಿದ್ದು, 146 ಮಂದಿ ನಾನಾ ಕಾರಣಗಳಿಗಾಗಿ ಗೈರಾಗಿದ್ದರು.

ಈ ವೇಳೆ ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಬಿ.ಭಾಸ್ಕರ್ ಮಾತನಾಡಿ, ಎಲ್ಲಾ ರೌಡಿಗಳ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೆರೇಡ್ ಕರೆಯಲಾಗಿದೆ. ಈ ಪೆರೇಡ್‌ನಲ್ಲಿ ಭಾಗವಹಿಸಿದ ಎಲ್ಲಾ ರೌಡಿಗಳಿಗೆ ಡಿ.12ರಂದು ಪುನಃ ನಗರದ ಠಾಣೆಯಲ್ಲಿ ಪೆರೇಡ್ ನಡೆಸಲಾಗುವುದು. ಆಕಸ್ಮಾತ್‌ ಆಗಲೂ ಹಾಜರಾಗದವರನ್ನು ಎಲ್ಲೇ ಇದ್ದರೂ ಬಿಡುವುದಿಲ್ಲ. ಹಾಗಾಗಿ ರೌಡಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದರು.

ADVERTISEMENT

ಕೆಲವರು ಕಾರಣಾಂತರಗಳಿಂದ ಅಪರಾಧಗಳಲ್ಲಿ ಸಿಲುಕಿಕೊಂಡರೆ, ಮತ್ತೆ ಕೆಲವರು ರೌಡಿಸಂನ್ನು ಹವ್ಯಾಸ ಮಾಡಿಕೊಂಡಿರುತ್ತಾರೆ. ಹಾಗಾಗಿ ಯಾವುದೋ ಕಾರಣಕ್ಕಾಗಿ ಮಾಡಿದ ಕೃತ್ಯಗಳನ್ನು ಮರುಕಳಿಸದೆ ಒಳ್ಳೆಯ ಗುಣಗಳನ್ನು ರೂಡಿಸಿಕೊಂಡು ಬದಲಾವಣೆಯಾಗಬೇಕು. ಇಲಾಖೆಗೆ ಬದಲಾವಣೆಯಾಗಿದ್ದಾರೆ ಎಂದು ತಿಳಿದರೆ ಅಂತಹವರನ್ನು ರೌಡಿಶೀಟರ್ ಪಟ್ಟಿಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಕೆಲವರು ಪದೇ ಪದೇ ಅಪರಾಧಗಳಲ್ಲಿ ತೊಡಗುತ್ತಿದ್ದಾರೆ. ಅಂತಹವರನ್ನು ಗೂಂಡಾ ಕಾಯ್ದೆಯ ಅಡಿಯಲ್ಲಿ ಗಡಿಪಾರು ಮಾಡಲಾಗುವುದು. ಕೆಲವರು ಮಾಡಿದ ತಪ್ಪುಗಳಿಂದಾಗಿ ಮನೋರೋಗಕ್ಕೆ ಒಳಗಾಗಿರುತ್ತಾರೆ ಅಂತಹವರಿಗೆ ಮನೋ ವಿಜ್ಞಾನಿಗಳಿಂದ ತಪಾಸಣೆಗೆ ಒಳಪಡಿಸಿ ಮಾನಸಿಕ ರೋಗದಿಂದ ದೂರ ಮಾಡಿಸಲಾಗುವುದು ಎಂದು ಹೇಳಿದರು.

ರೌಡಿಗೆ ಕನ್ನಡ ಪಾಠ ಮಾಡಿದ ಎಎಸ್‌ಪಿ: ರೌಡಿಗಳ ಪೆರೇಡ್ ನಡೆಸುವಾಗ ಅಪರಾಧಿಯೊಬ್ಬರಿಗೆ ಎಎಸ್‌ಪಿ ವಿಚಾರಣೆ ಮಾಡಲು ಮುಂದಾದಾಗ ಕನ್ನಡ ಭಾಷೆ ಬರುವುದಿಲ್ಲ ಎಂದು ಹೇಳಿದ ಅಪರಾಧಿಗೆ ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಬರಲ್ವ. ಕನ್ನಡ ಭಾಷೆಯನ್ನು ಕಲಿಯಬೇಕು, ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಹೇಳಿ ಕನ್ನಡಾಭಿಮಾನ ಮೆರೆದರು.

ಗ್ರಾಮಾಂತರ ಆರಕ್ಷಕ ವೃತ್ತ ನಿರೀಕ್ಷಕ ಸತೀಶ್, ನಗರ ಠಾಣೆ ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ಪಿಎಸ್‌ಐಗಳಾದ ನಂಗಲಿ ಠಾಣೆಯ ಅರ್ಜುನ್ ಎಸ್.ಆರ್.ಗೌಡ, ಗ್ರಾಮಾಂತರ ಠಾಣೆಯ ವಿಠಲ್ ವೈ ತಳವಾರ್, ಶ್ರೀನಿವಾಸಪುರ ಠಾಣೆಯ ರಮಾದೇವಿ, ಗೌನಿಪಲ್ಲಿ ರಾಮು ಹಾಗೂ ರಾಯಪ ಪಾಡು ಠಾಣೆಯ ಪಿಎಸ್ಐ ಯೋಗೇಶ್ ಮತ್ತಿತರರು ಇದ್ದರು.

ಪೆರೇಡ್‌ನಲ್ಲಿ ಭಾಗವಹಿಸಿದ್ದ ರೌಡಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.