ADVERTISEMENT

ಕೋಲಾರ: ಸುರಕ್ಷತಾ ಮಾರ್ಗಸೂಚಿ ಪಾಲನೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಮೇ 2020, 12:00 IST
Last Updated 9 ಮೇ 2020, 12:00 IST
ತಹಶೀಲ್ದಾರ್ ಶೋಭಿತಾ ಹಾಗೂ ನೋಡಲ್‌ ಅಧಿಕಾರಿಗಳು ಕೋಲಾರದ ಅಮ್ಮವಾರಿಪೇಟೆ ವೃತ್ತದಲ್ಲಿ ಶನಿವಾರ ಸುರಕ್ಷತಾ ಮಾರ್ಗಸೂಚಿ ಪಾಲನೆ ಸಂಬಂಧ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಶೋಭಿತಾ ಹಾಗೂ ನೋಡಲ್‌ ಅಧಿಕಾರಿಗಳು ಕೋಲಾರದ ಅಮ್ಮವಾರಿಪೇಟೆ ವೃತ್ತದಲ್ಲಿ ಶನಿವಾರ ಸುರಕ್ಷತಾ ಮಾರ್ಗಸೂಚಿ ಪಾಲನೆ ಸಂಬಂಧ ಪರಿಶೀಲನೆ ನಡೆಸಿದರು.   

ಕೋಲಾರ: ಲಾಕ್‌ಡೌನ್ ಸಡಿಲಿಕೆ ನಂತರ ಜಿಲ್ಲಾ ಕೇಂದ್ರದಲ್ಲಿನ ಪರಿಸ್ಥಿತಿ ಕುರಿತು ನೋಡಲ್ ಅಧಿಕಾರಿಗಳು ತಹಶೀಲ್ದಾರ್‌ ಶೋಭಿತಾ ಅವರ ನೇತೃತ್ವದಲ್ಲಿ ಶನಿವಾರ ಪರಿಶೀಲನೆ ನಡೆಸಿದರು.

ಮಾರುಕಟ್ಟೆಗಳಲ್ಲಿ ಹಾಗೂ ಅಂಗಡಿಗಳ ಬಳಿ ಜನರು ಖರೀದಿ ವೇಳೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಮತ್ತು ಮನೆಯಿಂದ ಹೊರ ಬರುವಾಗ ಮಾಸ್ಕ್‌ ಧರಿಸುತ್ತಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ಖುದ್ದು ಅವಲೋಕನ ನಡೆಸಿದರು.

ನಗರದ ಪ್ರಮುಖ ವೃತ್ತವಾದ ಅಮ್ಮವಾರಿಪೇಟೆ ವೃತ್ತದಲ್ಲಿ ಜನರು ಮತ್ತು ವ್ಯಾಪಾರಿಗಳು ಕೊರೊನಾ ಸೋಂಕು ತಡೆಗೆ ಸುರಕ್ಷತಾ ಮಾರ್ಗಸೂಚಿ ಪಾಲಿಸುತ್ತಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿದರು.

ADVERTISEMENT

ಕೆಲ ಅಂಗಡಿಗಳ ಬಳಿ ಗ್ರಾಹಕರು ಅಂತರ ಕಾಯ್ದುಕೊಳ್ಳದೆ ಖರೀದಿಗೆ ಮುಗಿಬಿದ್ದಿದ್ದನ್ನು ಕಂಡು ಅಸಮಾಧಾನಗೊಂಡ ತಹಶೀಲ್ದಾರ್, ‘ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಜಾಗೃತಿ ಮೂಡಿಸುವುದು ಅಂಗಡಿ ಮಾಲೀಕರ ಜವಾಬ್ದಾರಿ. ಈ ವಿಚಾರದಲ್ಲಿ ಮಾಲೀಕರು ನಿರ್ಲಕ್ಷ್ಯ ತೋರಿದರೆ ಅಂಗಡಿಯ ವಾಣಿಜ್ಯ ಪರವಾನಗಿ ರದ್ದುಪಡಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ನೋಡಲ್ ಅಧಿಕಾರಿಗಳಾದ ಡಿಡಿಪಿಐ ಕೆ.ರತ್ನಯ್ಯ, ಕೆ.ಎನ್.ಮಂಜುನಾಥ್, ಶ್ರೀನಿವಾಸ್ ವಿವಿಧ ವಾರ್ಡ್‌ಗಳಲ್ಲಿ ಜನರಿಗೆ ಮತ್ತು ವರ್ತಕರಿಗೆ ಆರೋಗ್ಯ ಸುರಕ್ಷತಾ ಮಾರ್ಗಸೂಚಿ ಪಾಲನೆ ಸಂಬಂಧ ಮಾರ್ಗದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.