ಕೋಲಾರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್) ಇಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸೋಮಣ್ಣ ಮತ್ತು ಉಪಾಧ್ಯಕ್ಷರಾಗಿ ಜಿ.ನಾರಾಯಣಪ್ಪ ಅವಿರೋಧ ಆಯ್ಕೆಯಾದರು.
ಸಂಘದ 14 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ನಾರಾಯಣಪ್ಪ ಮಾತ್ರ ನಾಮಪತ್ರ ಸಲ್ಲಿಸಿದರು. ಎದುರಾಳಿಗಳಾಗಿ ಇತರ ನಿರ್ದೇಶಕರು ಉಮೇದುವಾರಿಕೆ ಸಲ್ಲಿಸದ ಕಾರಣ ಈ ಇಬ್ಬರು ಅವಿರೋಧ ಆಯ್ಕೆಯಾದರು.
ಚುನಾವಣೆ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಶಾಸಕ ಕೆ.ಶ್ರೀನಿವಾಸಗೌಡ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡುವಂತೆ ಸಂಘದ ಇತರ ನಿರ್ದೇಶಕರಿಗೆ ಸೂಚನೆ ನೀಡಿದರು. ಶಾಸಕರ ಮಾತಿಗೆ ಒಪ್ಪಿದ ಎಲ್ಲಾ ನಿರ್ದೇಶಕರು ನಾಮಪತ್ರ ಸಲ್ಲಿಸಲಿಲ್ಲ. ಸೋಮಣ್ಣ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾದರು. ನಾಗರಾಜಗೌಡ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಪ್ರಥಮ ಸ್ಥಾನದಲ್ಲಿದೆ: ‘ಟಿಎಪಿಸಿಎಂಎಸ್ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ. ರೈತಪರ ಕಾರ್ಯಕ್ರಮಗಳನ್ನು ಮುಂದುವರಿಸಿದರೆ ಸಂಸ್ಥೆಗೆ ಹೆಚ್ಚಿನ ಆದಾಯ ಬರುತ್ತದೆ. ಟಿಎಪಿಸಿಎಂಎಸ್ ರೈತರ ಸಂಸ್ಥೆಯಾಗಿದೆ. ತಾಲ್ಲೂಕಿನ ರೈತರಿಗೆ ಸಂಸ್ಥೆಯು ಅನುಕೂಲ ಕಲ್ಪಿಸಬೇಕು’ ಎಂದು ಶ್ರೀನಿವಾಸಗೌಡ ಸಲಹೆ ನೀಡಿದರು.
‘ರೈತರ ಸಂಸ್ಥೆಯಾಗಿರುವುದರಿಂದ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ. ಸಂಸ್ಥೆಯ ನಿರ್ದೇಶಕರು ಸಹಕಾರ ನೀಡಬೇಕು’ ಎಂದು ನೂತನ ಅಧ್ಯಕ್ಷ ಸೋಮಣ್ಣ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ನಿರ್ದೇಶಕ ದಯಾನಂದ್, ಟಿಎಪಿಸಿಎಂಎಸ್ ನಿರ್ದೇಶಕರಾದ ಇ.ಗೋಪಾಲಪ್ಪ, ಟಿ.ವಿ.ತಿಮ್ಮರಾಯಪ್ಪ, ಎಂ.ಶ್ರೀರಾಮರೆಡ್ಡಿ, ಆರ್.ಚಂದ್ರೇಗೌಡ, ಎನ್.ಶ್ರೀರಾಮೇಗೌಡ, ಸಿ.ರಾಮಕೃಷ್ಣಪ್ಪ, ಕೆ.ವಿ.ಸುರೇಶ್, ಕೆ.ವಿ.ಶ್ರೀನಿವಾಸ್ ಯಾದವ್, ಡಿ.ಎಲ್.ದೇವರಾಜ್, ದೀಪಿಕಾ. ಎಚ್.ಮಂಜುಳಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.