ADVERTISEMENT

ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 17:10 IST
Last Updated 3 ಜೂನ್ 2021, 17:10 IST

ಕೋಲಾರ: ಇಲಾಖೆಯಿಂದ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ದೃಢೀಕೃತ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿ ಸಹಾಯಧನದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್‌.ನಾಗರಾಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ಸುಮಾರು 14,580 ಹೆಕ್ಟರ್‌ನಲ್ಲಿ ಬಿತ್ತನೆಯಾಗಲಿದೆ. ದೀರ್ಘಾವಧಿ ತಳಿಯಾದ ಎಂ.ಆರ್-1/6 ಬಿತ್ತನೆ ಬೀಜವನ್ನು 24 ಕ್ವಿಂಟಾಲ್‌ನಷ್ಟು ದಾಸ್ತಾನು ಮಾಡಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

850 ಹೆಕ್ಟೇರ್‌ನಲ್ಲಿ ತೊಗರಿ ಬೆಳೆ ಬಿತ್ತನೆಯಾಗಬೇಕಿದ್ದು, ಬಿಆರ್‌ಜಿ-1 ಮತ್ತು ಬಿಆರ್‌ಜಿ -5 ತಳಿಯ 14 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ತಾಲ್ಲೂಕಿನ ಹುತ್ತೂರು ಹೋಬಳಿಯಲ್ಲಿ ಪ್ರಮುಖವಾಗಿ ನೆಲಗಡಲೆ ಬೆಳೆಯುತ್ತಿದ್ದು, ಸುಮಾರು 200 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಾಗಿದೆ. ಟಿ-6 ತಳಿಯ 44.3 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

550 ಹೆಕ್ಟೇರ್‌ನಲ್ಲಿ ಅಲಸಂದೆ ಬೆಳೆ ಬಿತ್ತನೆಯಾಗಬೇಕಿದ್ದು, ಸೆ-152 ತಳಿಯ 2.4 ಕ್ವಿಂಟಾಲ್ ಬೀಜವನ್ನು ರೈತರಿಗೆ ವಿತರಿಸಲಾಗುತ್ತದೆ. ಒಟ್ಟಾರೆ ತಾಲ್ಲೂಕಿನಲ್ಲಿ 18,370 ಹೆಕ್ಟೇರ್ ಬಿತ್ತನೆ ಗುರಿಯಿದೆ. ರೈತರು ಮುಂದಿನ ಹಂಗಾಮಿಗೆ ತಾವೇ ಬೆಳೆದ ಬೆಳೆಯಿಂದ ಉತ್ತಮ ಬೀಜ ಆರಿಸಿಕೊಂಡು ಬೆಳೆಯಬೇಕು. ಪ್ರತಿ 3 ವರ್ಷಕ್ಕೊಮ್ಮೆ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಂದ ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ತಾಲ್ಲೂಕಿನಲ್ಲಿ ರಸಗೊಬ್ಬರಗಳ ದಾಸ್ತಾನು ಸಾಕಷ್ಟಿದೆ. ರೈತರು ನೇರವಾಗಿ ನಿಗದಿತ ದರಕ್ಕೆ ರಸಗೊಬ್ಬರ ಖರೀದಿಸಬೇಕು ಮತ್ತು ರಶೀದಿ ಪಡೆಯಬೇಕು. ಹೆಚ್ಚಿನ ದರ ಕೇಳಿದರೆ ರೈತ ಸಂಪರ್ಕ ಕೃಷಿ ಅಧಿಕಾರಿ ಅಥವಾ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.