ಕೋಲಾರ: ಜಿಲ್ಲೆಯಾದ್ಯಂತ 84 ಕೇಂದ್ರಗಳಲ್ಲಿ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ ಕನ್ನಡ, ಇಂಗ್ಲೀಷ್, ಉರ್ದು ಪರೀಕ್ಷೆಗೆ 476 ವಿದ್ಯಾರ್ಥಿಗಳು ಗೈರಾದರು.
ಜಿಲ್ಲೆಯಲ್ಲಿ 19,911 ಮಂದಿ ಹೊಸ ಅಭ್ಯರ್ಥಿಗಳು, 1,013 ಮಂದಿ ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ 20,448 ಮಂದಿ ಪರೀಕ್ಷೆ ಬರೆದರು. 19,600 ಮಂದಿ ಹೊಸ ಅಭ್ಯರ್ಥಿಗಳು, 848 ಮಂದಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. ಹೊಸ ಅಭ್ಯರ್ಥಿಗಳಲ್ಲಿ 311 ಮಂದಿ ಹಾಗೂ ಖಾಸಗಿ ಅಭ್ಯರ್ಥಿಗಳಲ್ಲಿ 165 ಮಂದಿ ಪರೀಕ್ಷೆಗೆ ಬರಲಿಲ್ಲ.
ಬಂಗಾರಪೇಟೆ ತಾಲ್ಲೂಕಿನ 13 ಕೇಂದ್ರಗಳಲ್ಲಿ 3,399 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ 79 ಮಂದಿ ಪರೀಕ್ಷೆಗೆ ಗೈರಾದರು. ಕೆಜಿಎಫ್ ತಾಲ್ಲೂಕಿನಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 2,595 ವಿದ್ಯಾರ್ಥಿಗಳಲ್ಲಿ 81 ಮಂದಿ ಪರೀಕ್ಷೆಗೆ ಬರೆಯಲಿಲ್ಲ.
ಕೋಲಾರ ತಾಲ್ಲೂಕಿನಲ್ಲಿ 5,987 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಇವರಲ್ಲಿ 190 ಮಂದಿ ಪರೀಕ್ಷೆಗೆ ಗೈರಾದರು. ಮಾಲೂರು ತಾಲ್ಲೂಕಿನಲ್ಲಿ ಹೆಸರು ನೋಂದಾಯಿಸಿದ್ದ 3,117 ಮಂದಿ ವಿದ್ಯಾರ್ಥಿಗಳಲ್ಲಿ 66 ಮಂದಿ ಪರೀಕ್ಷೆಗೆ ಬರಲಿಲ್ಲ.ಮುಳಬಾಗಿಲು ತಾಲ್ಲೂಕಿನಲ್ಲಿ 3,051 ಮಂದಿ ಹೆಸರು ನೋಂದಾಯಿಸಿದ್ದರು. ಅಂತಿಮವಾಗಿ 44 ಮಂದಿ ಪರೀಕ್ಷೆಗೆ ಗೈರಾದರು. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹೆಸರು ನೋಂದಾಯಿಸಿದ್ದ 2,775 ವಿದ್ಯಾರ್ಥಿಗಳಲ್ಲಿ 16 ಮಂದಿ ಗೈರಾದರು.
ಮರೆತು ಹೋದ ಹಿಜಾಬ್: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲಿಯೂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯುವ ಪ್ರಯತ್ನ ಮಾಡಲಿಲ್ಲ. ಪ್ರಥಮ ಭಾಷೆ ಕನ್ನಡ ಪರೀಕ್ಷೆ ದಿನ ಗದಗ ಜಿಲ್ಲೆಯಲ್ಲಿ 7 ಶಿಕ್ಷಕರು ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ ಕಾರಣಕ್ಕೆ ಅಮಾನತುಗೊಂಡಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಶಿಕ್ಷಕರು ಹೆಚ್ಚು ಎಚ್ಚರಿಕೆಯಿಂದ ಬುಧವಾರ ಪರೀಕ್ಷೆ ನಡೆಸಿದರು.
ಪರೀಕ್ಷಾ ಕೇಂದ್ರದ ಕೊಠಡಿಯಿಂದ ಹೊರಗೆ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಮ್ಮತಿಸಿದ್ದು, ಪೋಷಕರು ಸಹಕಾರ ನೀಡಿದ್ದರಿಂದ ಜಿಲ್ಲೆಯಲ್ಲಿಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.