ಬೇತಮಂಗಲ: ಬೀದಿ ನಾಯಿಗಳ ಹಾವಳಿಗೆ ಸುಮಾರು 15ಕ್ಕೂ ಹೆಚ್ಚು ಕುರಿಗಳು ಬಲಿಯಾಗಿದ್ದು, ಕುರಿಗಾಯಿಗಳಲ್ಲಿ ಆತಂಕ ಹೆಚ್ಚಿಸಿದೆ.
ಕೆಜಿಎಫ್ ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಮದ ನಾರಾಯಣಪ್ಪ ಅವರಿಗೆ ಸೇರಿದ ಕುರಿಗಳ ದೊಡ್ಡಿಯ ಮೇಲೆ ಸೋಮವಾರ ರಾತ್ರಿ ಬೀದಿ ನಾಯಿಗಳ ಗುಂಪು ದಾಳಿ ಮಾಡಿ, 15 ಕುರಿಗಳನ್ನು ಕೊಂದಿವೆ.
15 ಕುರಿಗಳಿಂದ ₹1.50 ಲಕ್ಷ ನಷ್ಟ: ಟಿ.ಗೊಲ್ಲಹಳ್ಳಿ ಗ್ರಾಮದ ನಾರಾಯಣಪ್ಪ ಅವರ ಕುಟುಂಬ ಕುರಿಗಳನ್ನೇ ನಂಬಿ ಜೀವನ ಕಟ್ಟಿಕೊಂಡಿದೆ. ಈಗ ಹೀಗೆ ಏಕಾಏಕಿ ನಾಯಿಗಳ ದಾಳಿಗೆ 15 ಕುರಿಗಳು ಸಾವಿಗೀಡಾಗಿದ್ದು, ₹1.50ಲಕ್ಷ ನಷ್ಟವಾಗಿದ್ದಕ್ಕೆ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಎರಡು ಬಾರಿ ನಾಯಿಗಳ ದಾಳಿ: ಇದೇ ಗ್ರಾಮದಲ್ಲಿ ಈಗಾಗಲೇ ಎರಡು-ಮೂರು ಬಾರಿ ನಾಯಿಗಳ ದಾಳಿಗೆ ಕುರಿಗಳು ಬಲಿಯಾಗಿವೆ. ಸೋಮವಾರ ರಾತ್ರಿ ಒಂದೇ ಬಾರಿಗೆ, ಒಬ್ಬರಿಗೇ ಸೇರಿದ 15 ಕುರಿಗಳು ಸಾವಿಗೀಡಾಗಿರುವುದು ಆತಂಕ ಸೃಷ್ಟಿಸಿದೆ ಎಂದು ಪ್ರಸನ್ನ ಕುಮಾರ್ ಅವಲತ್ತುಕೊಂಡರು.
ಟಿ.ಗೊಲ್ಲಹಳ್ಳಿ ಗ್ರಾಮ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಪದೇ ಪದೇ ಕುರಿಗಳ ಮೇಲೆ, ಮಕ್ಕಳ ಮೇಲೆ ನಾಯಿಗಳ ದಾಳಿ ಮುಂದುವರೆದಿದ್ದು, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿಲ್ಲ. ನಾಯಿಗಳಿಂದ ಮೂಕ ಪ್ರಾಣಿಗಳನ್ನು ಹಾಗೂ ಮುದ್ದು ಮಕ್ಕಳನ್ನು ಕಾಪಾಡುವುದು ಅನಿವಾರ್ಯವಾಗಿದೆ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಬೇತಮಂಗಲ ಪಶು ವೈದ್ಯಾಧಿಕಾರಿ ತ್ರಿಮೂರ್ತಿ ನಾಯಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಇಲಾಖೆಯಿಂದ ದೊರೆಯುವ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.