ADVERTISEMENT

ಅಕ್ರಮ ಚಟುವಟಿಕೆ ತಾಣವಾದ ವಿದ್ಯಾರ್ಥಿ ನಿಲಯ

9 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ₹1 ಕೋಟಿ ವೆಚ್ಚದ ನಿಲಯ

ವಿ.ರಾಜಗೋಪಾಲ್
Published 16 ಸೆಪ್ಟೆಂಬರ್ 2020, 5:28 IST
Last Updated 16 ಸೆಪ್ಟೆಂಬರ್ 2020, 5:28 IST
ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯ ಕಾಮಗಾರಿ ಸ್ಥಗಿತಗೊಂಡು ಗಿಡಗಂಟಿ ಬೆಳೆದಿರುವುದು
ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯ ಕಾಮಗಾರಿ ಸ್ಥಗಿತಗೊಂಡು ಗಿಡಗಂಟಿ ಬೆಳೆದಿರುವುದು   

ಮಾಲೂರು: ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಗುತ್ತಿಗೆದಾರರ ಬೇಜವಾಬ್ದಾರಿಯಿಂದ 9 ವರ್ಷಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ತಾಲ್ಲೂಕಿನ ಗಡಿ ಗ್ರಾಮ ಮಾಸ್ತಿ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಅಂದಿನ ಶಾಸಕರಾಗಿದ್ದ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ₹1 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿ ನಿಲಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ಕಟ್ಟಡ ನಿರ್ಮಾಣ ಕಾಮಗಾರಿ ಜವಾಬ್ದಾರಿಯನ್ನು ಲ್ಯಾಂಡ್ ಆರ್ಮಿ ಕೈಗೆತ್ತಿಕೊಂಡಿತ್ತು. ಅರ್ಧದಷ್ಟು ಕಾಮಗಾರಿ ನಡೆಸಿ ನಂತರ ಸ್ಥಗಿತಗೊಳಿಸಿದೆ. ವಿದ್ಯಾರ್ಥಿ ನಿಲಯದ ಕಾಮಗಾರಿ ಸ್ಥಗಿತಗೊಂಡು 9 ವರ್ಷ ಕಳೆದರೂ ಮತ್ತೆ ಕಾಮಗಾರಿ ಆರಂಭಗೊಂಡಿಲ್ಲ. ವಿದ್ಯಾರ್ಥಿ ನಿಲಯ ಪಾಳು ಬಿದ್ದು ಅಕ್ರಮಚಟುವಟಿಕೆಗಳ ತಾಣವಾಗಿದೆ. ಕಟ್ಟಡವು ಸತ್ವವನ್ನು ಕಳೆದುಕೊಂಡು ಶಿಥಿಲಾವಸ್ಥೆ ಹಂತಕ್ಕೆ ತಲುಪುತ್ತಿದೆ.

ADVERTISEMENT

9 ವರ್ಷಗಳಿಂದ ವಿದ್ಯಾರ್ಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಂತ ಬಾಡಿಗೆ ಕಟ್ಟಡದಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಕೆಲವರು ತಮ್ಮ ಸ್ನೇಹಿತರ ಮನೆ, ರೂಮ್‌ಗಳಲ್ಲಿ ಹಗಲು ಕಳೆದು, ರಾತ್ರಿ ವೇಳೆ ತಮ್ಮ ಗ್ರಾಮಗಳಿಗೆ ತೆರಳುವಪರಿಸ್ಥಿತಿ ಎದುರಿ
ಸುತ್ತಿದ್ದಾರೆ. ಎಂದು ಗ್ರಾಮಸ್ಥರು ದೂರಿದ್ದಾರೆ.

ಕಾಮಗಾರಿ ಆರಂಭಿಸಿ: ‘ಅಧಿಕಾರ ಇಂದು ಇರುತ್ತದೆ, ನಾಳೆ ಹೋಗುತ್ತದೆ. ಆದರೆ, ನಾವು ಮಾಡಿದ ಕೆಲಸಗಳು ಮಾತ್ರ ನಮ್ಮ ಹೆಸರು ಹೇಳುತ್ತವೆ. ಜನ ಪ್ರತಿನಿಧಿಗಳು ಕೊರೊನಾ ಸಂದರ್ಭದಲ್ಲಿ ಒಂದು ಕೆ.ಜಿ ಮೈದಾ ಹಿಟ್ಟು ಹಂಚಿ ತಾಲ್ಲೂಕಿನ ಜನತೆಯನ್ನುಉದ್ಧಾರ ಮಾಡಿದ್ದೇವೆ ಎಂದು ಪ್ರಚಾರ ಪಡೆಯುವುದು ಬಿಟ್ಟು ನಿಂತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿ
ಸಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ, ಜನರಿಗೆ ಅನುಕೂಲ ಕಲ್ಪಸಬೇಕು’ ಎಂದು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಕಿಡಿ ಕಾರಿದರು.

ಶಾಸಕ, ಸಂಸದರ ಕಣ್ಣಿಗೆ ಕಾಣುತ್ತಿಲ್ಲವೆ?

ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ಅತಿ ಹೆಚ್ಚು ಅನುದಾನ ತಂದಿದ್ದೇವೆ ಎಂದು ಹೇಳಿಕೊಳ್ಳುವ ಇಲ್ಲಿನ ಶಾಸಕರು ಹಾಗೂ ಇದೇ ತಾಲ್ಲೂಕಿನ ಸಂಸದರಿಗೆ ವಿದ್ಯಾರ್ಥಿ ನಿಲಯ ಕಣ್ಣಿಗೆ ಕಾಣದಂತಾಗಿದೆ. ಹಲವು ಬಾರಿ ಜಿಲ್ಲಾಡಳಿತಕ್ಕೂ ಮನವಿ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾಲೇಜು ಆರಂಭವಾದರೇ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇಲ್ಲವಾದರೆ ವಿದ್ಯಾರ್ಥಿಗಳ ಪಾಡು ಕಷ್ಟಕರವಾಗಲಿದೆ ಎಂದು ಮಾಸ್ತಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ.ಶ್ರೀನಿವಾಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.