ಕೋಲಾರ: ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಹಾಗೂ ತೆರಿಗೆ ಪಾವತಿಸುವ ಕುರಿತು ನಗರದಲ್ಲಿ ನಗರಸಭೆಯಿಂದ ಶುಕ್ರವಾರ ಜಾಗೃತಿ ಜಾಥಾ ನಡೆಯಿತು.
ನಗರಭೆ ಪೌರಾಯುಕ್ತ ಶ್ರೀಕಾಂತ್ ಚಾಲನೆ ನೀಡಿ ಮಾತನಾಡಿ, ‘ಪ್ಲಾಸ್ಟಿಕ್ ಬಳಕೆ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ. ಇನ್ನು ಮುಂದೆ ಯಾರಾದರು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಕಸ ಮುಕ್ತ ನಗರ ನಿರ್ಮಾಣ ಮಾಡುವ ಜವಾಬ್ದಾರಿ ನಾಗರಿಕರ ಮೇಲಿದೆ. ಈ ಬಗ್ಗೆ ಯುವಕರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಕಸ ವಿಲೇವಾರಿಗೆ ತಾಲ್ಲೂಕಿನ ಪೊಂಬರಹಳ್ಳಿ ಸಮೀಪ ಜಾಗ ಗುರುತಿಸಲಾಗಿದೆ. ಸಾರ್ವಜನಿಕರು ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು’ ಎಂದು ಸಲಹೆ ನೀಡಿದರು.
‘ಸಾಲಕಾಲಕ್ಕೆ ತೆರಿಗೆ ಪಾವತಿಯಾಗದ ಕಾರಣ, ನಗರಸಭೆ ಸಿಬ್ಬಂದಿಗೆ ವೇತನ ನೀಡಲು ಅಗುತ್ತಿಲ್ಲ. ಮತ್ತೊಂದು ಕಡೆ ಆದಾಯ ಹೆಚ್ಚಳ ಮಾಡಲು ಅಗುತ್ತಿಲ್ಲ. ಬಿಲ್ ಕಲೆಕ್ಟರ್ಗಳು ತೆರಿಗೆ ವಸೂಲಿಗೆ ಬಂದಾಗ ನಾಗರಿಕರು ಸ್ಪಂದಿಸಬೇಕು’ ಎಂದು ತಿಳಿಸಿದರು.
ನಗರದ ಎಂಜಿ ರಸ್ತೆ, ದೊಡ್ಡಪೇಟೆ, ಕ್ಲಕ್ ಟವರ್, ಅಮ್ಮವಾರಿ ಪೇಟೆ ಭಾಗದಲ್ಲಿ ವಾಣಿಜ್ಯ ತೆರಿಗೆ ಬಾಕಿ ಉಳಿದಿದೆ. ನೋಟಿಸ್ ನೀಡಿದ್ದರೂ ಪಾವತಿಗೆ ಮುಂದಾಗಿಲ್ಲ. ಕೊನೆ ನೋಟಿಸ್ಗೂ ಮಣಿಯದಿದ್ದರೆ ಕಾನೂನು ಕ್ರಮಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ವಕ್ಫ್ ಬೋರ್ಡ್ ₹ 93 ಲಕ್ಷ, ನಾಗರಾಜ ಸ್ಟೋರ್ ₹ 40 ಲಕ್ಷ, ಚಿನ್ಮಯ ಶಾಲೆ ₹65ಲಕ್ಷ, ಭವಾನಿ ಚಿತ್ರಮಂದಿರ ₹23ಲಕ್ಷ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಯೂನಿಯನ್ ತಲಾ ₹10ಲಕ್ಷ ಸೇರಿದಂತೆ ಇನ್ನೂ ಅನೇಕರು ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಪಾವತಿ ಮಾಡಬೇಕು’ ಎಂದು ಹೇಳಿದರು.
ನಗರಸಭೆ ಅಧಿಕಾರಿಗಳು ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಜಾಥಾವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ನಗರಸಭೆ ವ್ಯವಸ್ಥಾಪಕ ತ್ಯಾಗರಾಜ್, ಆರೋಗ್ಯ ನಿರೀಕ್ಷಕರಾದ ದೀಪಾ, ಮರಿಯಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.