ಕೋಲಾರ: ‘ಯುವಕರು ಕುವೆಂಪು ಮಾದರಿಯ ಚಿಂತನೆ ಮೈಗೂಡಿಸಿಕೊಂಡು ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಬೇಕು’ ಎಂದು ಶಾಸಕ ಕೆ ಶ್ರೀನಿವಾಸಗೌಡ ಕಿವಿಮಾತು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಜಯಂತ್ಯುತ್ಸವದಲ್ಲಿ ಮಾತನಾಡಿ, ‘ಯುವಕ ಯುವತಿಯರು ಸುಶಿತಕ್ಷಿತರಾಗಿ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.
‘ಬರಡು ಭೂಮಿಯಾದ ಕೋಲಾರ ಜಿಲ್ಲೆಗೆ ಕುಡಿಯುವ ನೀರು ಕೊಡುವಂತೆ ಒತ್ತಾಯಿಸಿ ಪಾದಯಾತ್ರೆ ಮತ್ತು ವಿಚಾರ ಸಂಕಿರಣ ನಡೆಸಿದವು. ಕೆ.ಸಿ ವ್ಯಾಲಿ ಯೋಜನೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಿ ಕೆರೆಗಳಿಗೆ ನೀರು ಹರಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ಕುಮಾರ್ ಶೆಟ್ಟಿ ಒತ್ತಾಯಿಸಿದರು.
‘ನಾನು ಕರಾವಳಿ ಭಾಗದವನಾದರೂ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಎತ್ತಿನ ಹೊಳೆ ಯೋಜನೆ ನೀರನ್ನು ಬಯಲುಸೀಮೆಗೆ ಕೊಡಬೇಕು ಎನ್ನುವುದು ನಮ್ಮ ಸಂಘಟನೆಯ ಉದ್ದೇಶವಾಗಿದೆ. ಯೋಜನೆ ಕಾಮಗಾರಿ ಶೀಘ್ರವಾಗಿ ಪೂರ್ಣಗೊಂಡು ನೀರು ಹರಿದು ಬಂದರೆ ಜಿಲ್ಲೆಯ ಜನರ ಬದುಕು ಹಸನಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಕುವೆಂಪು ನಿಸರ್ಗದ ಜತೆಗೆ ಶ್ರಮಿಕರ ಕವಿಯಾಗಿ ವರ್ಷದ 365 ದಿನವೂ ಕನ್ನಡ ಭಾಷೆ ಬೆಳೆಸಿದರು. ಸಂವಿಧಾನದ ಆಶಯದೊಂದಿಗೆ ರಚಿಸಿದ ನಾಡಗೀತೆ ಮತ್ತು ರೈತ ಗೀತೆಯ ಇವರ ಸಾಹಿತ್ಯದ ಆಲೋಚನೆಗೆ ಕೈಗನ್ನಡಿ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.
ಇತಿಹಾಸ ಪ್ರಾಧ್ಯಾಪಕ ಕೆ.ಶ್ರೀನಿವಾಸ್. ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನ್ಸರ್ ಅಹಮ್ಮದ್. ಸಮಾಜ ಸೇವಕ ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಶಿವರಾಜ್ಗೌಡ, ಜಿಲ್ಲಾ ಅಧ್ಯಕ್ಷ ರಾಜೇಶ್, ಬಿಬಿಎಂಪಿ ಸದಸ್ಯ ಎಸ್.ಮುನಿಸ್ವಾಮಿ, ನೀರಾವರಿ ಹೋರಾಟ ವೇದಿಕೆ ಸಂಚಾಲಕ ವಿ.ಕೆ.ರಾಜೇಶ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.