ಶ್ರೀನಿವಾಸಪುರ: ತಾಲ್ಲೂಕಿನ ಕಶೆಟ್ಟಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಿಕ್ಷಕಿಯೊಬ್ಬರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿ ವರಲಕ್ಷ್ಮಿ ಅವರನ್ನು ಯಾವುದೇ ಕಾರಣಕ್ಕೂ ಶಾಲೆಯಿಂದ ವರ್ಗವಾಣೆ ಮಾಡಬಾರದೆಂದು ಒತ್ತಾಯಿಸಿದರು.
ಶಾಲೆಗೆ ಸಂಬಂಧಿಸಿದಂತೆ ಶೈಕ್ಷಣಿಕವಾಗಿ ಹಾಗೂ ಇತರೆ ಅವೃದ್ಧಿಗಾಗಿ ಶ್ರಮಿಸಿರುವ ಶಿಕ್ಷಕಿ ಇದೇ ಶಾಲೆಯಲ್ಲಿ ಕಾರ್ಯನಿರ್ವಹಿಸಬೇಕು. ವರ್ಗಾವಣೆ ಆದೇಶ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಶಾಲೆಯಲ್ಲಿ ಹಿಂದೆ ಕೇವಲ 20 ಇದ್ದ ವಿದ್ಯಾರ್ಥಿಗಳ ಸಂಖ್ಯೆಯನ್ನು 102ಕ್ಕೇರಿಸಿದ್ದಾರೆ. ಹೀಗಾಗಿ, ವರಲಕ್ಷ್ಮಿ ಅವರ ವರ್ಗಾವಣೆ ಹಿಂಪಡೆಯಬೇಕೆಂದು ಬಿಇಒ, ಡಿಡಿಪಿಐ, ಆಯುಕ್ತರಿಗೆ ಈಗಾಗಲೇ ಮನವಿ ಪತ್ರ ಸಲ್ಲಿಸಿದ್ದೆವು. ಈವರೆಗೆ ಯಾವುದೇ ಕ್ರಮ ಕೈಗೊಂಡಿರದ ಕಾರಣ ಶಾಲೆಗೆ ಬೀಗ ಜಡಿದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಗಾವಣೆಯನ್ನು ಹಿಂಪಡೆಯದಿದ್ದಲ್ಲಿ ನಮ್ಮ ಮಕ್ಕಳ ವರ್ಗಾವಣೆ ಪತ್ರವನ್ನು ಪಡೆಯಲಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮಸ್ಥ ರಾಮಚಂದ್ರಾರೆಡ್ಡಿ ಮಾತನಾಡಿ, ‘ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರಲು ಕಾರಣ ಶಿಕ್ಷಕಿ ವರಲಕ್ಷ್ಮಿ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಶ್ರಮವಹಿಸಿರುವ ಅವರನ್ನು ವರ್ಗವಾಣೆ ಮಾಡಿರುವುದು ಖಂಡನೀಯ’ ಎಂದರು.
ಎಸ್ಡಿಎಂಸಿ ಅಧ್ಯಕ್ಷ ನವೀನ್, ಗ್ರಾಮಸ್ಥರಾದ ಮಂಜುನಾಥರೆಡ್ಡಿ, ಮುರಳಿ, ಮಂಜುನಾಥ್, ಚಂದ್ರಪ್ಪ, ರತ್ನಮ್ಮ, ಅನಿತಾ, ಚೌಡಮ್ಮ, ನಿರ್ಮಲ, ಗೌರಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.