ADVERTISEMENT

ಭೂಮಾಫಿಯಾವನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಬೈರತಿ ಸುರೇಶ್‌

ಮಾಲೂರು ಜಮೀನು ಪ್ರಕರಣದಲ್ಲಿ ಜಿಲ್ಲಾಧಿಕಾರಿಯಿಂದ ತಡೆ: ಸಚಿವ ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 4:25 IST
Last Updated 27 ಜನವರಿ 2026, 4:25 IST
<div class="paragraphs"><p>ಸಚಿವ ಬೈರತಿ ಸುರೇಶ್‌ </p></div>

ಸಚಿವ ಬೈರತಿ ಸುರೇಶ್‌

   

ಕೋಲಾರ: ಮಾಲೂರು ಸೇರಿದಂತೆ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲೂ ಸರ್ಕಾರಿ ಜಮೀನನ್ನು ಕಬಳಿಸಲು ಯತ್ನಿಸಿದರೆ ಅಂಥವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಯಾವುದೇ ಕಾರಣಕ್ಕೂ ಭೂಮಾಫಿಯಾದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾಲೂರು ತಾಲ್ಲೂಕಿನ 81 ಎಕರೆ ಜಾಗದ ಸಂಬಂಧ ರೈತ ಸಂಘದವರು ಮನವಿ ಪತ್ರ ನೀಡಿದ್ದರು. ಈ ಸಂಬಂಧ ಮಾತನಾಡಿದ್ದು, ಜಿಲ್ಲಾಧಿಕಾರಿಯು ತಡೆ ನೀಡಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ ತನಿಖೆ ಕೂಡ ನಡೆಸಲಾಗುವುದು. ಏನಾದರೂ ತಪ್ಪು ನಡೆದಿದ್ದರೆ ವಾಪಸ್‌ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು’ ಎಂದರು.

ADVERTISEMENT

ಉಪವಿಭಾಗಾಧಿಕಾರಿ ಡಾ.ಮೈತ್ರಿ ವರ್ಗಾವಣೆಗೆ ಈ ಪ್ರಕರಣ ಕಾರಣವೇ ಎಂಬ ಪ್ರಶ್ನೆಗೆ, ‘ಅವರು ಜಿಲ್ಲೆಗೆ ಬಂದು ಎರಡೂವರೆ ವರ್ಷವಾಗಿತ್ತು. ಹೀಗಾಗಿ, ವರ್ಗಾವಣೆ ಆಗಿದೆ. ಶಿಕ್ಷೆಯ ವರ್ಗಾವಣೆ ಎಂಬುದಿಲ್ಲ. ಆದರೆ, ಯಾರೇ ತಪ್ಪು ಮಾಡಿದ್ದರೂ ಸಹಿಸುವುದಿಲ್ಲ’ ಎಂದು ಹೇಳಿದರು.

ರಾಜ್ಯಪಾಲರ ನಡೆ ಬಗ್ಗೆ ಮಾತನಾಡಿ, ‘ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಂಪೂರ್ಣವಾಗಿ ಭಾಷಣ ಓದಬೇಕಿತ್ತು. ಸರ್ಕಾರ ಗೌರವದಿಂದ ನಡೆದುಕೊಂಡಿದೆ. ಅವರು ಮೊಟಕುಗೊಳಿಸಿ ಭಾಷಣ ಮಾಡಿದ್ದಾರೆ. ಇದು ಎಷ್ಟು ಮಾತ್ರ ಸರಿ?’ ಎಂದು ಕೇಳಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಚ್‌.ಡಿ.ದೇವೇಗೌಡರು ವಾಗ್ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿ, ‘ದೇವೇಗೌಡರು ರಾಜ್ಯದ ಬಹಳ ದೊಡ್ಡ ನಾಯಕರು. ಯಜಮಾನರು ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಧಾನಿಯಾಗಿದ್ದವರು, ಹಿರಿಯರ ಬಗ್ಗೆ ಮಾಡುವುದಿಲ್ಲ, ರಾಜಕಾರಣದಲ್ಲಿ ಟೀಕೆ ಟಿಪ್ಪಣೆ ಸಹಜ’ ಎಂದರು.

ಮಹಾರಾಷ್ಟ್ರ ರಾಜ್ಯಕ್ಕೆ ತೆರಳುತ್ತಿದ್ದ ಹಣದ ಕಂಟೈನರ್‌ಗಳು ರಾಜ್ಯದಲ್ಲಿ ನಾಪತ್ತೆ ಆಗಿರುವ ಮಾತ್ರಕ್ಕೆ ಕಾಂಗ್ರೆಸ್‌ ಪಕ್ಷದವರ ಕೈವಾಡ ಇದೆ ಎಂದು ಬಣ್ಣ ಕಟ್ಟುವುದು ಸರಿಯಲ್ಲ. ನೋಟಿನ ಮೇಲೆ ಸರ್ಕಾರದ್ದು, ಕಾಂಗ್ರೆಸ್‌ನದ್ದು ಎಂದು ಬರೆದ್ದಿದ್ದಾರೆಯೇ ಎಂದು ಪ್ರಶ್ನಿಸಿದರು.

ಮುಂಬರುವ ಬಜೆಟ್‌ನಲ್ಲಿ ಜಿಲ್ಲೆಗೆ ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ, ‘ಈ ಹಿಂದೆ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಸರ್ಕಾರದಿಂದ ಘೋಷಣೆ ಮಾಡಲಾಗಿತ್ತು. ಯಾರೂ ಮುಂದೆ ಬಾರದ ಕಾರಣ ಇದೀಗ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಯೋಜನೆ ಇದ್ದು, ಬಜೆಟ್‌ನಲ್ಲಿ ಘೋಷಣೆ ಆಗಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆ, ಪ್ರವಾಸಿ ಮಂದಿರ, ರೇಷ್ಮೆ ಇಲಾಖೆಯ ಜಾಗ ಹಾಗೂ ಡಿಎಚ್‌ಒ ಕಚೇರಿ ಬಳಿ ಮತ್ತೊಂದು ಜಾಗ ಗುರುತಿಸಲಾಗಿದೆ. ಈ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಮಾರುಕಟ್ಟೆಗಾಗಿ 100 ಎಕರೆ ಜಮೀನು ಗುರುತು ಮಾಡಿದ್ದು, ಆ ಪೈಕಿ 60 ಎಕರೆ ಜಾಗ ಅಂತಿಮವಾಗಿದೆ. ಇನ್ನು ಉಳಿದ ಜಾಗವು ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ಅದಷ್ಟು ಬೇಗ ಅಂತಿಮಗೊಳಿಸಿ, ಸರ್ಕಾರದ ಮೂಲಕ ಘೋಷಣೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಬಾಂಗ್ಲಾದೇಶ ವಲಸಿಗರು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಿಯೇ ಅಕ್ರಮವಾಗಿ ವಾಸವಿದ್ದರೆ ದೇಶದಿಂದ ಗಡಿಪಾರು ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಕೋಮುಲ್‌ ನಿರ್ದೇಶಕ ಚಂಜಿಮಲೆ ಬಿ.ರಮೇಶ್‌, ಬೆಂಗಳೂರು ಉತ್ತರ ವಿ.ವಿ ಸಿಂಡಿಕೇಟ್‌ ಸದಸ್ಯ ಸೀಸಂದ್ರ ಗೋಪಾಲಗೌಡ, ‘ಕುಡಾ’ ಅಧ್ಯಕ್ಷ ಮಹಮ್ಮದ್‌ ಹನೀಫ್‌, ಕಾಂಗ್ರೆಸ್‌ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಮೈಲಾಂಡಹಳ್ಲಿ ಮುರಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.