ADVERTISEMENT

ಸಮಸ್ಯಾತ್ಮಕ ರೈಲ್ವೆ ಕೆಳ ಸೇತುವೆ: ಜನರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:05 IST
Last Updated 5 ಡಿಸೆಂಬರ್ 2021, 5:05 IST
ಶ್ರೀನಿವಾಸಪುರ ಹೊರವಲಯದ ರೈಲ್ವೆ ಕೆಳ ಸೇತುವೆಗಳಲ್ಲಿ ತುಂಬಿಕೊಂಡಿರುವ ಮಳೆ ನೀರನ್ನು ಹೊರತೆಗೆಯಲು ಶನಿವಾರ ಪಂಪ್‌ಸೆಟ್‌ನೊಂದಿಗೆ ಟ್ರಾಲಿಯಲ್ಲಿ ಹೊರಟಿರುವ ರೈಲ್ವೆ ಸಿಬ್ಬಂದಿ
ಶ್ರೀನಿವಾಸಪುರ ಹೊರವಲಯದ ರೈಲ್ವೆ ಕೆಳ ಸೇತುವೆಗಳಲ್ಲಿ ತುಂಬಿಕೊಂಡಿರುವ ಮಳೆ ನೀರನ್ನು ಹೊರತೆಗೆಯಲು ಶನಿವಾರ ಪಂಪ್‌ಸೆಟ್‌ನೊಂದಿಗೆ ಟ್ರಾಲಿಯಲ್ಲಿ ಹೊರಟಿರುವ ರೈಲ್ವೆ ಸಿಬ್ಬಂದಿ   

ಶ್ರೀನಿವಾಸಪುರ: ರೈಲ್ವೆ ಕೆಳ ಸೇತುವೆಗಳಲ್ಲಿ ಸಂಗ್ರಹವಾಗಿರುವ ಮಳೆ ನೀರಿನಿಂದಾಗಿ ನಾಗರಿಕರ ಸಂಚಾರಕ್ಕೆ ತೊಂದರೆಯಾಗಿದೆ.

ಜೋರು ಮಳೆಯಾದರೆ ವಾಹನ ಸಂಚಾರ ಸ್ಥಗಿತಗೊಂಡು ಹತ್ತಾರು ಕಿ.ಮೀ ಬಳಸಿಕೊಂಡು ನಿಗದಿತ ಸ್ಥಳ ತಲುಪಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ನಿಂತು ಮೂರು ದಿನ ಕಳೆದಿದ್ದರೂ, ರೈಲ್ವೆ ಕೆಳ ಸೇತುವೆಗಳ ಕೆಳಗೆ ನಿಂತಿರುವ ನೀರನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ. ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಹೊರವಲಯದಲ್ಲಿನ ಕೆಳಸೇತುವೆ ಮಳೆಗಾಲದಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

ADVERTISEMENT

ಹಲವು ಗ್ರಾಮಗಳನ್ನು ಸಂಪರ್ಕಿ‌ಸುವ ರಸ್ತೆ ಈ ರೈಲ್ವೆ ಕೆಳಸೇತುವೆ ಕೆಳಗೆ ಹಾದುಹೋಗುತ್ತದೆ. ಕೋಲಾರ, ಶ್ರೀನಿವಾಸಪುರ ಮತ್ತಿತರ ನಗರಗಳಿಗೆ ಹೋಗಬೇಕಾದರೆ ಸೇತುವೆ ಆಚೆಗಿನ ಗ್ರಾಮಗಳ ಜನರು ಈ ಸೇತುವೆ ಕೆಳಗಿನ ರಸ್ತೆ ಮೂಲಕವೇ ಹೋಗಬೇಕು. ಮಳೆಯಾದರೆ ಸಂಚಾರ ಸ್ಥಗಿತಗೊಳ್ಳುತ್ತದೆ.

‘ಚಲ್ದಿಗಾನಹಳ್ಳಿ ಕೆಳ ಸೇತುವೆ ಸಮೀಪದ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ. ಹಾಗಾಗಿ, ಕೆರೆ ಸೇರಬೇಕಾದ ಮಳೆ ನೀರು ರೈಲ್ವೆ ಕೆಳಸೇತುವೆ ಕೆಳಗೆ ಸಂಗ್ರಹವಾಗುತ್ತದೆ. ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಸಮಸ್ಯೆ ಮುಂದುವರಿದಿದೆ’ ಎಂದು ರೈಲ್ವೆ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳೂ ಕಳಪೆಯಾಗಿವೆ. ನಿರ್ಮಾಣದಲ್ಲಿ ಸಿಮೆಂಟ್ ಬಳಕೆ ತೀರಾ ಕಡಿಮೆ. ಮರಳಿನಿಂದ ತಡೆಗೋಡೆ ನಿರ್ಮಿಸಲಾಗಿದೆ. ರೈಲ್ವೆ ಕೆಳ ಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಕೆಲವು ಸೇತುವೆಗಳ ಕೆಳಗೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿಲ್ಲ. ಅಂತಹ ಸೇತುವೆಗಳ ಕೆಳಗೆ ಕೆಸರು ತುಂಬಿಕೊಂಡು ಜನರು ಓಡಾಡಲು ಪರದಾಡಬೇಕಾಗಿದೆ’ ಎಂಬುದು ಸ್ಥಳೀಯರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.