ADVERTISEMENT

ಮಾಹಿತಿ ನೀಡದ ಅಧಿಕಾರಿಗಳು ತರಾಟೆಗೆ

ನಗರಸಭೆಗೆ ಡಿಸಿ ಜೆ.ಮಂಜುನಾಥ್ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 15:52 IST
Last Updated 18 ಜೂನ್ 2019, 15:52 IST
ಕೋಲಾರ ನಗರಸಭೆಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ವಿವಿಧ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೋಲಾರ ನಗರಸಭೆಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ವಿವಿಧ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.   

ಕೋಲಾರ: ನಗರದ ನಗರಸಭೆ ಕಚೇರಿಗೆ ಮಂಗಳವಾರ ದಿಢೀರನೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಗರಸಭೆ ಚುನಾಯಿತ ಆಡಳಿತ ಮಂಡಳಿ ಅಧಿಕಾರವಧಿ ಮುಗಿದಿದ್ದು, ಈಗ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹಿಂದೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿ, ಗಡವು ನೀಡಿದ್ದರು.

‘ಸಾರ್ವಜನಿಕರಿಂದ ನೇರವಾಗಿ, ಪೋನ್ ಮೂಲಕ ನೀರು, ಕಸದ ವಿಚಾರವಾಗಿ ಅನೇಕ ದೂರುಗಳು ಬಂದಿವೆ. ಹಂತಹಂತವಾಗಿ ಎಲ್ಲವನ್ನು ಬಗೆಹರಿಸುವುದಾಗಿ ಹೇಳಿದರು. ಪಂಪುಮೋಟರ್‌ಗಳ ವಿಚಾರವಾಗಿ ಪ್ರಕರಣ ದಾಖಲು ಮಾಡದಿರುವುದು ಗಮನಕ್ಕೆ ಬಂದಿದ್ದು, ವರದಿ ನೀಡಿದ ಬಳಿಕ ಮುಂದಿನ ಕ್ರಮಜರುಗಿಸಲಾಗುವುದು’ ಎಂದರು.

ADVERTISEMENT

ಪಂಪು, ಮೋಟರ್ ಕುರಿತು ಮಾಹಿತಿ ಕೇಳಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ, ‘ಎಂಜನಿರ್‌ಗಳಾದ ಪೂಜಾರಪ್ಪ, ಸುಧಾಕರ್‌ಶೆಟ್ಟಿ ಮಾಹಿತಿ ನೀಡಲು ತಡಬಡಿಸಿದರು.

‘ಅಲ್ಲದೆ ರಿಜಿಸ್ಟರ್ ನಿರ್ವಹಣೆ ಬಗ್ಗೆ ಕೇಳಿದಾಗ ನಮ್ಮ ಅವಧಿಯದ್ದು ಗೊತ್ತಿದೆ, ಬೇರೆಯವರ ಅವಧಿಯಲ್ಲಿ ದುರ್ಬಳಕೆ ಆಗಿರಬಹುದು ನಮಗೆ ಗೊತ್ತಿಲ್ಲ’ ಎಂದು ಸಬೂಬು ನೀಡಿದರು.

ಇದರಿಂದ ಗರಂ ಅದ ಜಿಲ್ಲಾಧಿಕಾರಿ, ‘ಪಂಪು ಮೋಟಾರು ಕಳವು ಅಗಿರುವುದಕ್ಕೆ ಯಾಕೆ ಎಫ್‌ಐಆರ್ ದಾಖಲಿಸಿಲ್ಲ. ಯಾವುದಕ್ಕೂ ಲೆಕ್ಕ ಇಲ್ಲವೆಂದರೆ ಹೇಗೆ. ಇಷ್ಟು ನಿರ್ಲಕ್ಷ್ಯವಹಿಸುವ ನಿಮ್ಮ ಮೇಲೆ ಕ್ರಮಕೈಗೊಂಡು ನಿಮ್ಮಿಂದಲೇ ಏಕೆ ವಸೂಲಿ ಮಾಡಬಾರದು’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಕಳುವಾಗಿರುವ ವಸ್ತುಗಳು, ಹಿಂದೆ ದಾಸ್ತಾನು ಮಾಡಿದ್ದ ವಸ್ತುಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಒದಗಿಸಲು ಈ ಕೂಡಲೇ ನೋಟೀಸ್ ನೀಡುವಂತೆ ಪೌರಾಯುಕ್ತರು, ಯೋಜನಾ ನಿರ್ದೇಶಕರಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಣೆ ಕುರಿತು ಪೂಜಾರಪ್ಪ ಹೇಳಲು ಮುಂದಾದಾಗ ಕೆಂಡಕಾರಿದ ಜಿಲ್ಲಾಧಿಕಾರಿ, ‘ನಿರ್ವಹಣೆ ವಿಚಾರವಾಗಿ ಗ್ರಾಪಂಗೆ ಒಂದು ಕಾನೂನು ನಿಮಗೆ ಒಂದು ಕಾನೂನು ಇದೆಯೇ’ ಎಂದು ತರಾಟೆಗೆ ತೆಗೆದುಕೊಂಡರು.

‘ನೀವು ಹೇಳಿದ್ದನ್ನು ಕೇಳಿಕೊಂಡು ಹೋಗುವುದಕ್ಕೆ ಇದೇನು ಕಳ್ಳೇಪುರಿ ವ್ಯಾಪಾರ ಅಲ್ಲ. 3 ವರ್ಷದಲ್ಲಿ ನಡೆದಿರುವ ಕಾಮಗಾರಿಗಳ ಕುರಿತು ತಿಂಗಳಾಂತ್ಯಕ್ಕೆ ವರದಿ ನೀಡದಿದ್ದಲ್ಲಿ ಸಂಬಂಧಿಸಿದವರನ್ನು ಬಲಿ ತೆಗೆಯಬೇಕಾಗುತ್ತದ’ ಎಂದು ಎಚ್ಚರಿಕೆ ನೀಡಿದರು.

‘ಕೊಳವೆಬಾವಿ ಭತ್ತಿ ಹೋದ ಮೇಲೆ ಪಂಪು ಮೋಟಾರು ತಂದು ಕಚೇರಿ ಆಚರಣದಲ್ಲಿ ಇಡಬೇಕಿತ್ತು, ಅಲ್ಲೆ ಬಿಡಿ ಎಂದು ಯಾರಾದರೂ ಹೇಳಿದ್ದರೇನು’ ಎಂದು ಪ್ರಶ್ನಿಸಿದರು, ಇದಕ್ಕೆ ಉತ್ತರಿಸಿದ ಎಂಜನಿಯರ್ ಪೂಜಾರಪ್ಪ, ‘ನೀರು ನಿಂತ ಸಂದರ್ಭದಲ್ಲಿ ಅಲ್ಲಿಂದ ಪಂಪು ಮೋಟರ್, ಪೈಪ್‌ಗಳನ್ನು ತೆಗೆದುಕೊಂಡು ಬರುವುದಕ್ಕೆ ನಗರಸಭೆ ಮಾಜಿ ಸದಸ್ಯರು ಅಡ್ಡಿಪಡಿಸುತ್ತಾರೆ’ ಎಂದು ಗಮನಕ್ಕೆ ತಂದರು.

ವಿವಿಧ ಯೋಜನೆಗಳಡಿ ಅಭಿವೃದ್ಧಿ ಕಾಮಗಾರಿಗಳಿಗೆ ಆದೇಶಪತ್ರ ನೀಡಿದ್ದರೂ, ಹಣ ಮಂಜೂರಾಗಿದ್ದರೂ ಆರಂಭ ಮಾಡದೇ ಇರುವುದು ಬೆಳಕಿಗೆ ಬಂದಿತು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಪೌರಾಯುಕ್ತ ಸತ್ಯನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.