ಮಾಲೂರು: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶನಿವಾರ ಶಿವನ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು.
ಭಕ್ತರು ಶ್ರದ್ಧಾ ಭಕ್ತಿಯಿಂದ ಮಡಿಯುಟ್ಟು ಇಡೀ ದಿನ ಉಪವಾಸವಿದ್ದು ಶಿವನಿಗೆ ಪೂಜೆ ಸಲ್ಲಿಸಿದರು. ದೇಗುಲಗಳಿಗೆ ತೆರಳಿ ದೇವರ ದರ್ಶನ ಪಡೆದು ತೀರ್ಥ, ಪ್ರಸಾದ ಸ್ವೀಕರಿಸಿದರು.
ಪಟ್ಟಣದ ದೊಡ್ಡಪೇಟೆ ರಸ್ತೆ ಬಳಿ ಇರುವ ಶ್ರೀಶಂಕರನಾರಾಯಣ ಸ್ವಾಮಿ ದೇಗುಲ, ಕುಂಭೇಶ್ವರ ಸ್ವಾಮಿ, ಬೀರೇಶ್ವರ ಸ್ವಾಮಿ, ಬಸವಣ್ಣ ದೇಗುಲ ಸೇರಿದಂತೆ ಸಂತೆಪೇಟೆಯ ಪಂಚಲಿಂಗೇಶ್ವರ ಸ್ವಾಮಿ ದೇವಾಲಯಗಳಲ್ಲಿ ಶಿವ ಲಿಂಗಗಳಿಗೆ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರುದ್ರಾಭೀಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು.
ಪಟ್ಟಣದ ಪುರಾತನ ದೇಗುಲವಾದ ಶ್ರೀಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸಾಲಿಗ್ರಾಮ ಶಿವಲಿಂಗಕ್ಕೆ ಮುಂಜಾನೆಯಿಂದಲೇ ವಿಶೇಷ ಪೂಜೆ ನೆರವೇರಿಸಲಾಯಿತು.
ಭಾನುವಾರ ಮಧ್ಯರಾತ್ರಿಯಿಂದ ಹಾಲಿನ ಅಭಿಷೇಕ ಆರಂಭಗೊಂಡು ಮುಂಜಾನೆವರೆಗೂ ನಡೆಯಿತು. ದೇಗುಲದಲ್ಲಿ ರಾತ್ರಿ ಇಡೀ ಭಜನೆ, ಪಾರಾಯಣ, ಶಿವನಾಮ ಸ್ಮರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ್ ಅವರಿಂದ ನಾದಸ್ವರ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಶಿವನಾಮ ಸ್ಮರಣೆ ಮಾಡುತ್ತಾ ದೇವರ ದರ್ಶನ ಪಡೆದರು.
ತಾಲ್ಲೂಕಿನ ಗುಡ್ನಹಳ್ಳಿಯ ವೀರಭದ್ರಸ್ವಾಮಿ ದೇವಾಲಯ ಹಾಗೂ ದೊಡ್ಡಶಿವಾರ ಗ್ರಾಮದ ಗಂಗಾಧರೇಶ್ವರ ಸ್ವಾಮಿ ದೇಗುಲಗಳಲ್ಲಿ ಶನಿವಾರ ಸಂಜೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಿಕ್ಕತಿರುಪತಿಯ ಓಂಕಾರೇಶ್ವರ ಸ್ವಾಮಿ ಮತ್ತು ತಾಳಕುಂಟೆಯ ಚಂದ್ರಮೌಳೇಶ್ವರ ದೇಗುಲಕ್ಕೆ ನೂರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.