ಮುಳಬಾಗಿಲು: ತಾಲ್ಲೂಕಿನ ಹೆಬ್ಬಣಿ ಗ್ರಾಮದ ತ್ಯಾಜ್ಯ ಹಾಗೂ ಸುತ್ತಮುತ್ತಲಿನ ಅಂಗಡಿಯವರು ತ್ಯಾಜ್ಯವನ್ನು ಹೆಬ್ಬಣಿ ಕೆರೆಗೆ ಸುರಿಯುತ್ತಿದ್ದು, ಕೆರೆ ಕಸದ ತೊಟ್ಟಿಯಂತಾಗಿದೆ ಎಂಬುದು ಕೆರೆ ಬಳಿಯ ಜನರ ಆರೋಪವಾಗಿದೆ.
ಹೆಬ್ಬಣಿ ಗ್ರಾಮ ಪಂಚಾಯಿತಿ ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದೆ. ಪುಂಗನೂರು ಮುಖ್ಯರಸ್ತೆಯಲ್ಲಿ ವಾರದ ಸಂತೆ, ಚಿಕನ್, ಮಟನ್, ಹೋಟೆಲ್, ಮಧ್ಯಪಾನ ಮಾರಾಟ ಮುಂತಾದ ಕಾರಣಗಳಿಂದ ಪ್ರತಿನಿತ್ಯ ಲೋಡ್ಗಟ್ಟಲೇ ಕಸ ಹಾಗೂ ಇನ್ನಿತರೆ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ತ್ಯಾಜ್ಯವನ್ನು ವವ್ಯಾಪಾರಿಗಳು ಕೆರೆಗೆ ತಂದು ಸುರಿಯುತ್ತಿದ್ದಾರೆ. ಇದರಿಂದ ಜಾನುವಾರುಗಳನ್ನು ಮೇಯಿಸಲು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೋಳಿ ರೆಕ್ಕೆ, ಪುಕ್ಕ, ಪ್ಲಾಸ್ಟಿಕ್ ಬಾಟೆಲ್, ಮದ್ಯಪಾನದ ಖಾಲಿ ಬಾಟೆಲ್ ಹೀಗೆ ಅನೇಕ ರೀತಿಯ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದು, ಕೆರೆ ಸ್ವರೂಪನೇ ಕಳೆದು ಹೋಗಿದೆ. ಜತೆಗೆ ಇಲ್ಲಿನ ತ್ಯಾಜ್ಯ ಗಾಳಿಯಿಂದ ಕೆರೆಯ ತುಂಬಾ ಚೆಲ್ಲಾಪಿಲ್ಲಿಯಾಗಿದೆ. ಕೆಲವರು ಬಾಟಲಿಗಳು ಕೆರೆಯಲ್ಲಿ ಹೊಡೆದು ಕಾಲಿಡಲು ಸಾರ್ವಜನಿಕರು ಭಯಬೀಳುವಂತಾಗಿದೆ. ಹಾಗಾಗಿ ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗೆ ಕೆರೆಗೆ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.