ಕೋಲಾರ: ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ 25ನೇ ವಾರ್ಡ್ನ ಜೆಡಿಎಸ್ ಅಭ್ಯರ್ಥಿ ರಮೇಶ್ ಅವರ ಪರವಾಗಿ ಮತದಾರರಿಗೆ ಹಂಚಲು ತಂದಿದ್ದ ಕೈಗಡಿಯಾರಗಳನ್ನು ಚುನಾವಣೆ ನೀತಿಸಂಹಿತೆ ತಂಡದ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ರಮೇಶ್ರ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು 25ನೇ ವಾರ್ಡ್ ವ್ಯಾಪ್ತಿಯ ಕಾರಂಜಿಕಟ್ಟೆ ಹಾಗೂ ಮುನೇಶ್ವರ ನಗರದಲ್ಲಿ ಮತದಾರರಿಗೆ ಕೈಗಡಿಯಾರಗಳನ್ನು ಹಂಚಿ ಮತ ಯಾಚಿಸುತ್ತಿದ್ದರು. ಈ ಬಗ್ಗೆ ವಿರೋಧ ಪಕ್ಷದವರು ಪೊಲೀಸರಿಗೆ ಹಾಗೂ ಚುನಾವಣೆ ನೀತಿಸಂಹಿತೆ ತಂಡದ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದರು.
ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಸುಮಾರು 300 ಕೈಗಡಿಯಾರ ಜಪ್ತಿ ಮಾಡಿದ್ದಾರೆ. ರಮೇಶ್ರ ಬೆಂಬಲಿಗರಿಗೆ ಕೈಗಡಿಯಾರ ಸರಬರಾಜು ಮಾಡುತ್ತಿದ್ದ ಈರಜ್ ಚಂದನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಚಂದನ್ ಬೈಕ್ನಲ್ಲಿ ಕೈಗಡಿಯಾರ ತಂದು ಕೊಡುತ್ತಿದ್ದ. ಪ್ರಕರಣ ಸಂಬಂಧ ಅಧಿಕಾರಿಗಳು ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ರಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.