ಬಂಗಾರಪೇಟೆ: ಬಿಸಿಲು ಏರುತ್ತಿದ್ದಂತೆ ಪಟ್ಟಣದ ನೀರಿನ ಬವಣೆ ಹೆಚ್ಚಿದೆ. ಜನರಿಗೆ ಸಮರ್ಪಕ ನೀರು ಪೂರೈಕೆ ಮಾಡುವುದು ಪುರಸಭೆಗೆ ಸವಾಲಾಗಿದೆ.
ಪಟ್ಟಣದ ಅಮರಾವತಿ ನಗರ, ಮುನಿಯಪ್ಪ ಬಡಾವಣೆ, ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆಗಳಲ್ಲಿ ಫೆಬ್ರುವರಿ ಅಂತ್ಯದವರೆಗೂ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈಗ 15 ದಿನಕ್ಕೊಮ್ಮೆ ಪೂರೈಕೆ ಆಗುತ್ತಿದೆ.
ಕೆಲ ವಾರ್ಡ್ಗಳಲ್ಲಿ 20 ದಿನವಾದರೂ ನೀರು ಪೂರೈಕೆಯಾಗುತ್ತಿಲ್ಲ. ಕೆರೆಗಳು ಬತ್ತಿಹೋಗಿ ವರ್ಷಗಳೇ ಕಳೆದಿದೆ. ಪಟ್ಟಣದ ನೀರು ಪೂರೈಕೆಗೆ ಆಧಾರವಾಗಿದ್ದ ಕೊಪ್ಪದಕೆರೆ ಸಂಪೂರ್ಣ ಒಣಗಿದೆ.
ಕೊಪ್ಪದ ಕೆರೆಯೊಂದರಲ್ಲೇ ಸುಮಾರು 35 ಕೊಳವೆ ಬಾವಿ ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ 150 ಕೊಳವೆ ಬಾವಿ ಕೊರೆಸಲಾಗಿತ್ತು. ಆದರೆ ಈಗ ಕೇವಲ 40 ಕೊಳವೆ ಬಾವಿಯಲ್ಲಿ ನೀರು ಪೂರೈಕೆ ಆಗುತ್ತಿದೆ. ಅದರಲ್ಲೂ ನೀರಿನ ಹರಿವು
ಕಡಿಮೆಯಾಗಿದೆ.
ಪಟ್ಟಣದ 27 ವಾರ್ಡ್ಗಳ ಪೈಕಿ 20 ವಾರ್ಡ್ಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ. ಲಾಕ್ಡೌನ್ ಬಳಿಕ ಪಟ್ಟಣದಲ್ಲಿ ನೀರಿನ ಬಳಕೆ ಹೆಚ್ಚಿದೆ. ಕುಟುಂಬದ ಎಲ್ಲಾ ಸದಸ್ಯರು 24 ಗಂಟೆ ಮನೆಯಲ್ಲೇ ಇರುವುದರಿಂದ ನೀರಿನ ಬಳಕೆ ಮಿತಿ ಮೀರಿದೆ. ಆದರೆ ಬೇಡಿಕೆಗೆ ತಕ್ಕಂತೆ ನೀರು ಪೂರೈಕೆ
ಆಗುತ್ತಿಲ್ಲ.
ಉಳ್ಳವರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಇಲ್ಲದವರು ಪುರಸಭೆ ನೀರಿಗೆ ಕಾಯುವ ಸ್ಥಿತಿ ಒದಗಿದೆ. ಲಾಕ್ಡೌನ್ನಿಂದ ಹಳ್ಳಿಗಳಿಂದ ಪಟ್ಟಣಕ್ಕೆ ಸಂಚರಿಸುವ ಕೆಲ ನೀರಿನ ಟ್ಯಾಂಕರ್ಗಳು ಸ್ಥಗಿತಗೊಂಡಿವೆ. ₹ 400 ₹ 450ಕ್ಕೆ ಮಾರಾಟವಾಗುತ್ತಿದ್ದ
ಟ್ಯಾಂಕರ್ ನೀರು ಈಗ ₹600- ₹ 650ಕ್ಕೆ ಏರಿದೆ. ಅಷ್ಟು ದುಡ್ಡು ಕೊಟ್ಟರೂ ತಕ್ಷಣಕ್ಕೆ ನೀರು ಸಿಗುವಖಾತರಿ ಇಲ್ಲವಾಗಿದೆ. ರಾಸುಗಳ ಪಾಲನೆ ಮಾಡುತ್ತಿರುವವರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.