ಕೋಲಾರ: ತಾಲ್ಲೂಕಿನ ಶೆಟ್ಟಿಮಾದಮಂಗಲ ಗ್ರಾಮದ ಬಳಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಜಮೀನಿನಲ್ಲಿ ವಾಮಾಚಾರ ನಡೆಸಲಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯ ಶೆಟ್ಟಿಮಾದಮಂಗಲದ ನಾಗರಾಜ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ದೊಡ್ಡ ಮಟ್ಟದ ವಾಮಾಚಾರ ಮಾಡಿರುವುದು ಕಂಡುಬಂದಿದ್ದು, ಗ್ರಾಮದ ಜನರಲ್ಲಿ ಆತಂಕ ಉಂಟುಮಾಡಿದೆ.
ಗ್ರಾಮದ ಹೊರವಲಯದ, ಕೋಲಾರ-ಚಿಂತಾಮಣಿ ಮುಖ್ಯ ರಸ್ತೆಗೆ ಇರುವ ಜಮೀನಿನಲ್ಲಿ ಶುಕ್ರವಾರ ರಾತ್ರಿ ವಾಮಾಚಾರ ನಡೆಸಿರುವುದು ಗೊತ್ತಾಗಿದೆ. ಶನಿವಾರ ಬೆಳಗ್ಗೆ ಎಂದಿನಂತೆ ಜಮೀನಿನ ಕಡೆಗೆ ನಾಗರಾಜ್ ತೆರಳಿದಾಗ ಪತ್ತೆಯಾಗಿದೆ. ಬಳಿಕ ಗ್ರಾಮಸ್ಥರು, ಸುತ್ತಮುತ್ತಲ ಜನರಿಗೆ ಮಾಹಿತಿ ನೀಡಿದ್ದಾರೆ.
ಕಪ್ಪು ಕೋಳಿಯನ್ನು ಹಲವು ವಸ್ತುಗಳೊಂದಿಗೆ ಮರದಲ್ಲಿ ನೇತು ಹಾಕಲಾಗಿದೆ. ಅಲ್ಲದೆ ನಿಂಬೆಹಣ್ಣು, ವಿಭೂತಿ, ಬಿಲ್ವಪತ್ರೆ ಕಾಯಿ, ಕೋಳಿ ಮೊಟ್ಟೆ, ಖರ್ಜೂ ಕಾಯಿ, ಕಂಚಿನ ಪ್ಲೇಟ್ನಲ್ಲಿ ಹೆಸರು, ಗುಂಡು ಸೂಜಿ, ಚಪ್ಪಲಿ ಮೊಳೆಗಳು ಸೇರಿದಂತೆ ಸುಮಾರು 40ರಿಂದ 50 ವಸ್ತುಗಳ ಕಟ್ಟಲಾಗಿದೆ.
ಬಳಿಕ ಶೆಟ್ಟಿಮಾದಮಂಗಲದ ವ್ಯಕ್ತಿಯೊಬ್ಬರನ್ನು ಸ್ಥಳಕ್ಕೆ ಕರೆಯಿಸಿ ಪೂಜೆ ಮಾಡಿಸಿ ವಸ್ತುಗಳನ್ನು ಬೆಂಕಿಗೆ ಹಾಕಿ ಸುಟ್ಟು ಹಾಕಲಾಯಿತು. ಮರದಲ್ಲಿ ನೇತಾಕಿದ್ದ ಜೀವಂತ ಕೋಳಿಯನ್ನು ಬಿಟ್ಟಿದ್ದಾರೆ. ಯಾರು ಈ ಕೃತ್ಯ ಎಸಗಿರಬಹುದು ಎನ್ನುವ ಚರ್ಚೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.