ಮುಳಬಾಗಿಲು: ತಾಲ್ಲೂಕಿನ ಎಚ್. ಗೊಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ಕಾಮಗಾರಿಗೆ ಶಾಸಕ ಸಮೃದ್ಧಿ ಮಂಜುನಾಥ್ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ‘ಸರ್ಕಾರದಿಂದ ಜಿಲ್ಲೆಗೆ ಮಂಜೂರಾಗಿದ್ದ ₹50 ಲಕ್ಷ ವೆಚ್ಚದ ಎರಡು ಪಶು ಚಿಕಿತ್ಸಾ ಕೇಂದ್ರಗಳ ಪೈಕಿ ಒಂದನ್ನು ತಾಲ್ಲೂಕಿನಲ್ಲಿ ಸ್ಥಾಪನೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ಕಟ್ಟಡ ಕಾಮಗಾರಿಯನ್ನು 6 ತಿಂಗಳ ಒಳಗೆ ಹೈಟೆಕ್ ಮಾದರಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ’ ಎಂದರು.
‘ರಾಜ್ಯ ಸರ್ಕಾರದಿಂದ ನನ್ನ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಪಿಎಂಜಿಎಸ್ವೈ ಅನುದಾನಕ್ಕೆ ಕೇಂದ್ರ ಸರ್ಕಾರದಿಂದ ಶೇ 80 ಮತ್ತು ರಾಜ್ಯ ಸರ್ಕಾರದಿಂದ ಶೇ 20ರಷ್ಟು ಅನುದಾನ ಬರುತ್ತದೆ. ಈ ಯೋಜನೆಯಡಿ ಕಾಂಗ್ರೆಸ್ ಶಾಸಕರಿರುವ ತಾಲ್ಲೂಕುಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಆದರೆ, ನನ್ನ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ, ತಾಲ್ಲೂಕಿನ ಅಭಿವೃದ್ಧಿಗಾಗಿ ಸದಾ ಸರ್ಕಾರದ ಜೊತೆ ಗುದ್ದಾಡುವಂತಾಗಿದೆ’ ಎಂದು ಹೇಳಿದರು.
‘ಕೋಮುಲ್ ಚುನಾವಣೆ ಮುಗಿದ ಇದೇ 25ರ ನಂತರ ನಾನು ಅನೇಕ ವಿಚಾರಗಳನ್ನು ತಾಲ್ಲೂಕಿನ ಜನರ ಮುಂದಿಡುತ್ತೇನೆ. ವಿರೋಧ ಪಕ್ಷಗಳು ನನ್ನ ವಿರುದ್ಧ ಮಾತನಾಡಿದರೆ ಸಹಿಸಿಕೊಳ್ಳಬಹುದು. ಆದರೆ ಸ್ವಪಕ್ಷದವರೇ( ಜೆಡಿಎಸ್) ಮಾತನಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.
ಕೋಮುಲ್ ಚುನಾವಣೆಯಲ್ಲಿ ಪೂರ್ವ ಹಾಗೂ ಪಶ್ಚಿಮ ಭಾಗದ ಇಬ್ಬರೂ ಅಭ್ಯರ್ಥಿಗಳು ಗೆದ್ದರೆ ಮುಂದೆ ನಡೆಯಲಿರುವ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಡೇರಿ ಚುನಾವಣೆ ಕನ್ನಡಿಯಾಗಲಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ 220 ಕೆವಿ ವಿದ್ಯುತ್ ಘಟಕ ಸ್ಥಾಪನೆಯಾಗಲಿದ್ದು, ಬಳಿಕ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ. ತಾಲ್ಲೂಕಿನ 4 ಹಳ್ಳಿಗಳಿಗೆ ಅಂಬೇಡ್ಕರ್ ಭವನ, ಹಾಗೂ ಗೊಲ್ಲಹಳ್ಳಿಯಲ್ಲಿ ₹16 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಹಾಗೂ ಗ್ರಾಮ ಲೆಕ್ಕಿಗರ ಹಾಗೂ ರಾಜಸ್ವ ನಿರೀಕ್ಷಕ ಕಟ್ಟಡ ನಿರ್ಮಿಸಲಾಗುವುದು ಎಂದರು.
ಇದೇ ವೇಳೆ ಗ್ರಾಮಸ್ಥರು ರಸ್ತೆ ಮತ್ತಿತರ ಸಮಸ್ಯೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು.
ಕಾಡೇನಹಳ್ಳಿ ಕೆ.ಎನ್. ನಾಗರಾಜ್, ಶಿನಿಗೇನಹಳ್ಳಿ ಆನಂದ ರೆಡ್ಡಿ, ರಘುಪತಿ ರೆಡ್ಡಿ, ಡಾ.ಪ್ರಕಾಶ್, ಬಿ.ವಿ. ಶಾಮೇಗೌಡ, ಡೆಕ್ಕನ್ ಶ್ರೀನಿವಾಸ್, ಎಂ. ಗೊಲ್ಲಹಳ್ಳಿ ಪ್ರಭಾಕರ್, ರೆಸಾರ್ಟ್ ಚಂದ್ರಹಾಸ್, ಪಿ.ಎಸ್.ವರದರಾಜಪ್ಪ, ರಾಜೇಂದ್ರ ಹಳ್ಳಿ ಗಣಪತೆಪ್ಪ, ಗೊಲ್ಲಹಳ್ಳಿ ಜಗದೀಶ್, ಕಾಡೇನಹಳ್ಳಿ ಅಶೋಕ್ ಕುಮಾರ್, ಶಂಕರಪ್ಪ, ಮೋಹನ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.