ಹನುಮಸಾಗರ: ಅಂತರ್ಜಲ ಅಭಿವೃದ್ಧಿ ಉದ್ದೇಶದಿಂದ ಇಲ್ಲಿನ ಪ್ರವಾಸಿ ಮಂದಿರದ ಸಮೀಪದ ಹಳ್ಳಕ್ಕೆ ಕಟ್ಟಲಾಗಿದ್ದ ಚೆಕ್ಡ್ಯಾಂನ ತಡೆಗೋಡೆ ಒಡೆದು ಅಪಾರ ಪ್ರಮಾಣದ ನೀರು ಹರಿದು ಹೋಗಿರುವುದು ಭಾನುವಾರ ಕಂಡು ಬಂದಿದೆ.
ಮಳೆಗಾಲದಲ್ಲಿ ಈ ಹಳ್ಳಕ್ಕೆ ವಾರಿಕಲ್, ಜೂಲಕಟ್ಟಿ ಹಾಗೂ ಜುಂಜಲಕೊಪ್ಪದ ಭಾಗಗಳಿಂದ ನೀರು ಹರಿದು ಬರುತ್ತದೆ. ಒಂದು ಉತ್ತಮ ಮಳೆಯಾದರೆ ಸದಾ ಕಾಲ ಈ ಡ್ಯಾಂನಲ್ಲಿ ನೀರು ಸಂಗ್ರಹವಾಗುತ್ತದೆ.
ಎರಡು ದಿನಗಳಿಂದ ಈ ಭಾಗದಲ್ಲಿ ನಿರಂತರ ಮಳೆ ಬರುತ್ತಿದ್ದರೂ ಈ ಡ್ಯಾಂನಲ್ಲಿ ಮಾತ್ರ ನೀರು ನಿಲ್ಲದೆ ಡ್ಯಾಂ ಪಕ್ಕದಲ್ಲಿ ಒಡೆದಿರುವ ಭಾಗದಿಂದ ಹರಿದು ವ್ಯರ್ಥವಾಗಿ ಹಳ್ಳ ಸೇರುತ್ತಿದೆ. ಜಲಾಯನ ಅಭಿವೃದ್ಧಿ ಯೋಜನೆಯಡಿಯಲ್ಲಿ ಒಂದು ವರ್ಷದ ಹಿಂದೆ ನಿರ್ಮಾಣವಾಗಿರುವ ಈ ಚೆಕ್ಡ್ಯಾಂ ಕಟ್ಟಡದ ಪಕ್ಕದಲ್ಲಿ ಭದ್ರ ಗೋಡೆ ನಿರ್ಮಿಸದೇ ಇರುವ ಕಾರಣವಾಗಿ ನೀರಿನ ರಭಸಕ್ಕೆ ಮಣ್ಣಿನ ಗೋಡೆ ಕೊಚ್ಚಿ ಹೋಗಿದೆ. ‘ಇಲ್ಲಿ ನೀರು ನಿಂತಿದ್ದರೆ, ವರ್ಷದ ವರೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಆಶ್ರಯ ದೊರಕುತ್ತಿತ್ತು, ಕಳಪೆ ಕಾಮಗಾರಿಯಿಂದ ಹಣ ವ್ಯರ್ಥ, ನೀರು ಹಾಳಾಯಿತು’ ಎನ್ನು್ತಾರೆ ಕುರಿಗಾಹಿ ಹನುಮಂತಪ್ಪ ಕಬ್ಬರಗಿ.
ನೀರು ಇನ್ನು ಹರಿಯುತ್ತಿದ್ದು ಹಾಗೂ ಮಳೆಗಾಲ ಈಗ ಆರಂಭವಾಗಿರುವುದರಿಂದ ಸಂಬಂಧಪಟ್ಟ ಇಲಾಖೆ ಚೆಕ್ಡ್ಯಾಮ್ ಕಟ್ಟಡಕ್ಕೆ ಹೊಂದಿಕೊಂಡಂತೆ ತಡೆಗೋಡೆ ನಿರ್ಮಿಸಿದರೆ ಅಪಾರ ಪ್ರಮಾಣದ ನೀರು ನಿಲ್ಲುತ್ತದೆ. ತಕ್ಷಣ ಕ್ರಮ ಕೈಕೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.