ADVERTISEMENT

ಕಂಪ್ಯೂಟರ್ ಮಾಹಿತಿ ಡಿಲೀಟ್!

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 10:15 IST
Last Updated 12 ಅಕ್ಟೋಬರ್ 2012, 10:15 IST

ಕೊಪ್ಪಳ: ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಸಿದ್ಧಪಡಿಸಿದ್ದ ವರದಿಯೇ ನಾಶವಾಗಿದೆ. ಕಂಪ್ಯೂಟರ್‌ನಲ್ಲಿ ಅಳವಡಿಸಲಾಗಿದ್ದ ಸುಮಾರು 200 ಪುಟಗಳಷ್ಟು ವರದಿಯನ್ನು `ಡಿಲೀಟ್~ ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಈ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ. ಅದೂ, ರಜಾ ದಿನದಂದು ಕಚೇರಿಗೆ ಆಗಮಿಸಿದ್ದ ಇಬ್ಬರು ನೌಕರರು ಈ ಕೃತ್ಯ ಎಸೆಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು `ಪ್ರಜಾವಾಣಿ~ಗೆ ಖಚಿತಪಡಿಸಿವೆ.

ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ನಡೆದಿತ್ತು. ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಈ ನೇಮಕಾತಿ ನಡೆದಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತನಿಖೆಯನ್ನು ನಡೆಸಲಾಗಿತ್ತು. ಅಲ್ಲದೇ, ಅಧಿಕಾರಿಗಳು ಸೇರಿದಂತೆ ಇಲಾಖೆ ಕೆಲ ಸಿಬ್ಬಂದಿ ಈ ಅಕ್ರಮ ನೇಮಕಾತಿ ನಡೆಸಿರುವ ಬಗ್ಗೆ ವರದಿಯಲ್ಲಿ ವಿವರಿಸಲಾಗಿತ್ತಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸಹ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು ಎಂದು ಇವೇ ಮೂಲಗಳು ತಿಳಿಸಿವೆ.

ಹೇಗಾದರೂ ಮಾಡಿ ವರದಿಯನ್ನು ಜಿಲ್ಲಾಧಿಕಾರಿಗೆ ತಲುಪಿಸಬಾರದು ಎಂಬ ಉದ್ದೇಶದಿಂದ ಇದೇ ತಿಂಗಳ ರಜಾ ದಿನದಂದು ಕಚೇರಿಗೆ ತೆರಳಿದ ಕೆಲ ನೌಕರರು ಕಂಪ್ಯೂಟರ್‌ನಲ್ಲಿದ್ದ ವರದಿಯ ಎಲ್ಲಾ ವಿವರಗಳನ್ನು ನಾಶ ಮಾಡಿದ್ದಾರೆ ಎನ್ನಲಾಗಿದೆ.

ಈ ನೌಕರರು ಯಾರು ಹಾಗೂ ಎಷ್ಟು ಜನ ನೌಕರರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಮಾತ್ರ ಗೊತ್ತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.