ಕೊಪ್ಪಳ: ದೇಶಕ್ಕೆ ಅನೇಕ ಮಹತ್ತರ ಯೋಜನೆಗಳನ್ನು ನೀಡುವ ಮೂಲಕ ಭಾರತವನ್ನು ವಿಶ್ವದಲ್ಲಿಯೇ ಮಹಾನ್ ಹಾಗೂ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸಿದ ಶ್ರೇಯಸ್ಸು ಕಾಂಗ್ರೆಸ್ಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಬಸವರಾಜ ಹಿಟ್ನಾಳ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
1885ರ ಡಿ.28ರಂದು ಮುಂಬೈನಲ್ಲಿ ಅಲೆನ್ ಹೋಮೆ ಹಾಗೂ ದಾದಾಬಾಯಿ ನವರೋಜಿ ಸಾರಥ್ಯದಲ್ಲಿ 72 ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡಿತು. ಮೊದಲ ಅಧ್ಯಕ್ಷರಾಗಿ ಎ.ಓ.ಹ್ಯೂಮ್ ಆಯ್ಕೆಯಾದರು. ಬ್ರಿಟಿಷರ ವಿರುದ್ಧ ಸ್ವತಂತ್ರ ಸಂಗ್ರಾಮದ ರಣಕಹಳೆ ಮೊಳಗಿಸಿದ ಪಕ್ಷ ಹಾಗೂ ಅನೇಕ ಸ್ವಾತಂತ್ರ್ಯ ಸೇನಾನಿಗಳ ಹೋರಾಟದಿಂದ ಭಾರತವನ್ನು ಸ್ವತಂತ್ರಗೊಂಡಿತು. ಬಡತನದಿಂದ ಬಳಲುತ್ತಿದ್ದ ದೇಶದ ಪುನಶ್ಚೇತನಕ್ಕೆ ಪಕ್ಷ ಸಾಕಷ್ಟು ಶ್ರಮಿಸಿದೆ ಎಂದರು.
'ದೇಶದ ಉದ್ದಗಲಕ್ಕೂ ಅನೇಕ ಅಣೆಕಟ್ಟೆಗಳನ್ನು ನಿರ್ಮಿಸುವ ಮೂಲಕ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಆ ಮೂಲಕ ದೇಶದಲ್ಲಿ ಹಸಿರುಕ್ರಾಂತಿ ಸೃಷ್ಟಿಸಿತು ಈ ಪಕ್ಷ. ಔದ್ಯೋಗೀಕರಣದ ಯೋಜನೆಗಳ ಮೂಲಕ ಕೈಗಾರಿಕೆಗಳನ್ನು ಸೃಷ್ಟಿಸಿ, ದೇಶದ ಯುವಕರಿಗೆ ಉದ್ಯೋಗ ಹಾಗೂ ತಾಂತ್ರಿಕತೆಯ ಸ್ಪರ್ಶ ನೀಡಿದೆ. ಇದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ ಭವ್ಯ ಭಾರತದ ಇತಿಹಾಸ' ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಕಾಟನ್ ಪಾಷಾ, ಮುಖಂಡರಾದ ಶಾಂತಣ್ಣ ಮುದಗಲ್, ದ್ಯಾಮಣ್ಣ ಚಿಲವಾಡಗಿ, ನಗರಸಭೆ ಸದಸ್ಯರಾದ ಬಾಳಪ್ಪ ಬಾರಕೇರ, ಮುತ್ತುರಾಜ ಕುಷ್ಟಗಿ, ಗವಿಸಿದ್ದಪ್ಪ ಮುದಗಲ್, ನಾಗರಾಜ ಪಟವಾರಿ, ಮಾನ್ವಿ ಪಾಷಾ, ಜಾಫರ್ ತಟ್ಟಿ, ಮಹೆಬೂಬ ಅರಗಂಜಿ, ಅಜ್ಜಪ್ಪಸ್ವಾಮಿ, ಶಿವಾನಂದ ಹೊದ್ಲೂರು, ಮುನೀರ್ ಸಿದ್ದಿಕಿ, ಕೋಟೇಶ್ ತಳವಾರ, ದೇವೇಂದ್ರಪ್ಪ ಕೋಳೂರ, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.