ತಾವರಗೇರಾ: ಸಮೀಪದ ಹುಲಿಯಾಪುರ-ನವಲಹಳ್ಳಿ ಸಂಪರ್ಕ ರಸ್ತೆಯುದ್ದಕ್ಕೂ ಸಸಿ ನೆಡಲು ತಗ್ಗು ತೆಗೆಯುವ ಕಾಮಗಾರಿ ನಡೆದಿದೆ. ಈ ಕಾಮಗಾರಿಗೆ ಸಾಮಾಜಿಕ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸುತ್ತಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಕಾಮಗಾರಿಯನ್ನು ಕೂಲಿ ಕಾರ್ಮಿಕರಿಂದ ಮಾಡಿಸಿದರೆ, ಕಾರ್ಮಿಕರು ಗುಳೆ ಹೋಗುವುದು ತಪ್ಪಿಸಬಹುದು. ಆದರೆ ಈ ಕಾಮಗಾರಿಗೆ ಯಂತ್ರ ಬಳಸುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ರಸ್ತೆಯ ಎರಡೂ ಬದಿಗಳಲ್ಲಿ ಸಸಿ ನೆಡಲು ಜೆಸಿಬಿ ಯಂತ್ರದ ಮೂಲಕ ಕಾರ್ಯ ನಡೆದಿದೆ. ಗ್ರಾಮೀಣ ಪ್ರದೇಶದ ಕಾಮಗಾರಿಗಳ್ನು ಕೂಲಿಕಾರ್ಮಿಕರಿಗೆ ನೀಡುವಂತೆ ಆದೇಶವಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸ್ಥಳೀಯ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ.
ನಮಗೆ ಅನ್ಯಾಯವಾಗಿದೆ’ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ‘ಬಹುತೇಕ ಸಂದರ್ಭಗಳಲ್ಲಿ ಕೂಲಿಕಾರ್ಮಿಕರು ಸಿಗುವುದಿಲ್ಲ. ಭೂಮಿ ಕಲ್ಲು ಮಿಶ್ರಿತವಾಗಿದ್ದು, ಕೂಲಿಕಾರ್ಮಿಕರಿಗೆ ಈ ಕಾಮಗಾರಿ ಕೈಗೊಳ್ಳಲು ಕಷ್ಟವಾಗುತ್ತದೆ. ಅದಕ್ಕಾಗಿ ಜೆಸಿಬಿ ಯಂತ್ರಗಳನ್ನು ಬಳಸಲಾಗುತ್ತಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.