ADVERTISEMENT

ಕುಷ್ಟಗಿ: ಅಡುಗೆ ಅನಿಲ ಗ್ರಾಹಕರ ಪ್ರತಿಭಟನೆ

ಗೃಹಬಳಕೆ ಸಿಲಿಂಡರ್‌ಗಳ ಅಕ್ರಮ ದಂಧೆ; ಆರೋಪ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 9:43 IST
Last Updated 1 ಜನವರಿ 2014, 9:43 IST

ಕುಷ್ಟಗಿ: ಅಡುಗೆ ಅನಿಲ ಸಿಲಿಂಡರ್‌­ಗಳಿಗಾಗಿ ಹೆಸರು ನೋಂದಾಯಿಸಿ ಬಹ­ಳಷ್ಟು ದಿನಗಳಾದರೂ ಸಿಲಿಂಡರ್‌ಗಳು ಪೂರೈಕೆಯಾಗುತ್ತಿಲ್ಲ, ಅಕ್ರಮ ದಂಧೆಯಲ್ಲಿ ತೊಡಗಿರುವ ವಿತರಕರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ನೂರಾರು ಗ್ರಾಹಕರು ಮಂಗಳವಾರ ಇಲ್ಲಿಯ ಭಾರತ್‌ ಗ್ಯಾಸ್‌ ವಿತರಣಾ ಮಳಿಗೆ ಬಳಿ ದಿಢೀರ್‌ ಪ್ರತಿಭಟನೆ ನಡೆಸಿದರು.

ಸಿಲಿಂಡರ್‌ಗಳಿಗಾಗಿ ಬೆಳಗಿನ ಜಾವದಿಂದಲೇ ಜನ ಸರದಿಯಲ್ಲಿ ನಿಂತಿದ್ದರು. ಆದರೆ ಪಟ್ಟಣಕ್ಕೆ ಬಂದಿದ್ದ ಸಿಲಿಂಡರ್‌ ಹೊತ್ತ ಲಾರಿ ದೇವದುರ್ಗದತ್ತ ಪ್ರಯಾಣಿಸಲು ಸಜ್ಜಾಗುತ್ತಿದ್ದುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಲಾರಿಯನ್ನು ತಡೆದು ನಿಲ್ಲಿಸಿದರು. ನಂತರ ಸ್ಥಳಕ್ಕೆ ಬಂದ ವಿತರಣಾ ಮಳಿಗೆ ಸಿಬ್ಬಂದಿಯನ್ನು ತೀವ್ರ ತರಾಟೆ ತೆಗೆದುಕೊಂಡ ನಂತರ ಸಿಲಿಂಡರ್‌ಗಳನ್ನು ವಿತರಿಸಲಾಯಿತು.

ಸಾಮಾನ್ಯ ಗ್ರಾಹಕರು ಸಿಲಿಂಡರ್‌ಗಳಿಗಾಗಿ ಪರದಾಡುತ್ತಿದ್ದರೆ ಹೋಟೆಲ್‌, ಆಟೋ, ಖಾನಾವಳಿ, ಬೇಕರಿ, ಡಾಬಾಗಳಿಗೆ ಅಕ್ರಮವಾಗಿ ಗೃಹಬಳಕೆ ಸಿಲಿಂಡರ್‌ಗಳು ನಿರಾತಂಕ­ವಾಗಿ ಸರಬರಾಜು ಆಗುತ್ತಿವೆ, ಅವುಗಳ ಮಾಲೀಕರು ಮತ್ತು ಗ್ಯಾಸ್‌ ಸಿಲಿಂಡರ್‌ ವಿತರಕರ ಮಧ್ಯೆ ಒಳ ಒಪ್ಪಂದವಾಗಿದ್ದು ವಿತರಕರು ಜನಸಾಮಾನ್ಯರನ್ನು ಸತಾಯಿಸುತ್ತಿದ್ದಾರೆ ಎಂದು ಅಸಮಾಧಾನ ತೋಡಿಕೊಂಡರು.

ಸದರಿ ವಿಷಯ ತಿಳಿದಿದ್ದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಥಳೀಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಹಕರು, ಗೃಹಬಳಕೆ ಸಿಲಿಂಡರ್‌ಗಳನ್ನು ಬಳಸುತ್ತಿರು­ವವರನ್ನು ಕೂಡಲೇ ಪತ್ತೆ ಮಾಡಿ ಕ್ರಮ ಜರುಗಿಸುವಂತೆ ಮಾಜಿ ಸೈನಿಕರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಹಂಪನಗೌಡ ಬಳೂಟಗಿ, ಪ್ರಭು ಜಾಹಗೀರದಾರ, ರಮೇಶಕುಮಾರ, ಹನುಮೇಶ, ಶಿವಕುಮಾರ ಪಾಟೀಲ ಇತರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.