ಕುಷ್ಟಗಿ: ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಮತದಾರರು ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಭದ್ರತಾ ಪಡೆ ಯೋಧರು ಪಥಸಂಚಲನ ನಡೆಸಿದರು.
ಪ್ರಮುಖ ಬೀದಿಗಳಲ್ಲದೇ ಪಟ್ಟಣದಲ್ಲೆಲ್ಲ ಸಂಚರಿಸಿದ ಬಂದೂಕುಧಾರಿ ಭದ್ರತಾಪಡೆಗಳ ತುಕಡಿಗಳ ಪಥ ಸಂಚಲನವನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ರೈಲ್ವೆ ಸುರಕ್ಷಾದಳ, ಗಡಿಭದ್ರತಾಪಡೆ, ಸಿ.ಆರ್.ಪಿ.ಎಫ್.ಗೆ ಸೇರಿದ ಎರಡು ನೂರು ಯೋಧರು ಹೆಜ್ಜೆ ಹಾಕಿದರು.
ಶಾಂತಿ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಮತದಾನ ವ್ಯವಸ್ಥೆಗೆ ನೆರವಾಗುವುದು ಮತ್ತು ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ನಡೆಯುತ್ತದೆ ಎಂಬುದರ ಬಗ್ಗೆ ಜನರಲ್ಲಿ ವಿಶ್ವಾಸ ವೃದ್ಧಿಸಲು ಪಥ ಸಂಚಲನ ನಡೆಸಲಾಗಿದೆ ಎಂದು ನೇತೃತ್ವ ವಹಿಸಿದ್ದ ಸಿಪಿಐ ನೀಲಪ್ಪ ಓಲೇಕಾರ ಪ್ರತಿಕ್ರಿಯಿಸಿದರು.
ಸಿ.ಆರ್.ಪಿ.ಎಫ್. ಇನ್ಸ್ಪೆಕ್ಟರ್ ಆರ್.ಎಂ.ಧೋತಿ, ಸುಬೇರ್ಸಿಂಗ್, ಆರ್.ಡಿ.ಯುವನಾತಿ, ಸಬ್ ಇನ್ಸ್ ಪೆಕ್ಟರ್ಗಳಾದ ಮಹಾದೇವ ಪಂಚಮುಖಿ, ಮೌನೇಶ ಮಾಲಿಪಾಟೀಲ, ಎ.ಎಸ್.ಐ ಸತ್ಯಪ್ಪ ಇದ್ದರು. ನಂತರ ತಾಲ್ಲೂಕಿನ ತಾವರಗೇರಾ ಮತ್ತು ಹನಮಸಾಗರಗಳಲ್ಲಿಯೂ ಪಥ ಸಂಚಲನ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.