ADVERTISEMENT

ಕ್ರಿಕೆಟ್ ಮೈದಾನವಾದ ಸರ್ಕಾರಿ ಕಚೇರಿ!

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 8:29 IST
Last Updated 7 ಜನವರಿ 2014, 8:29 IST

ಕನಕಗಿರಿ: ಸ್ಥಳೀಯ ಉಪ ತಹಶೀ  ಲ್ದಾರ್‌ ಕಾರ್ಯಾಲಯ (ಹಳೆಯ ಪೊಲೀಸ್‌ ಠಾಣೆ) ಕಟ್ಟಡ ಈಗ ಕ್ರಿಕೆಟ್ ಮೈದಾನವಾಗಿದೆ. ಇದರಿಂದ ಸ್ಥಳೀಯರು ಹಾಗೂ ಕಚೇರಿ ಕೆಲಸಕ್ಕೆ ಬರುವ ಜನರಿಗೆ ತೊಂದರೆಯಾಗಿದೆ.

ಕಳೆದ ವರ್ಷ ಹೊಸ ಪೊಲೀಸ್‌ ಠಾಣೆ ಕಟ್ಟಡ ಉದ್ಘಾಟನೆಯಾದ ನಂತರ ಹಳೆಯ ಪೊಲೀಸ್‌ ಠಾಣೆ ಕಟ್ಟಡವನ್ನು ಸ್ಥಳೀಯ ದ್ಯಾಮವ್ವನಗುಡಿ ಶಾಲೆಗೆ ನೀಡುವಂತೆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಶಾಸಕರಿಗೆ ಮನವಿ ಸಲ್ಲಿಸಿದ್ದರು. ಆದರೆ, ಜಿಲ್ಲಾಧಿಕಾರಿ ಉಪ ತಹಶೀಲ್ದಾರ್‌ ಕಟ್ಟಡಕ್ಕೆ ಅವಕಾಶ ಕಲ್ಪಿಸಿದ್ದರು.

ಉಪ ತಹಶೀಲ್ದಾರ್‌ ಕಾರ್ಯಾ ಲಯ ಇಲ್ಲಿ ಬಹಳ ದಿನಗಳ ವರೆಗೆ ಇರಲಿಲ್ಲ. ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಚಿದಾನಂದ ಮಠದ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಕೇಂದ್ರ (ಸಿಆರ್‌ಪಿ ಕಟ್ಟಡ)ಕ್ಕೆ ಸ್ಥಳಾಂತರಗೊಂಡ ಕಾರಣ ಈಗ ಇದು ಕ್ರಿಕೆಟ್ ಮೈದಾನವಾಗಿದೆ.

‘ಕ್ರಿಕೆಟ್‌ ಚೆಂಡು ತಾಗಿ ಹಲವರಿಗೆ ಈಚೆಗೆ ಗಾಯವಾಗಿದೆ. ಇಲ್ಲಿ ಆಟ ಆಡಬೇಡಿ, ಕಾಲೇಜು ಮೈದಾನಕ್ಕೆ ಹೋಗಿ ಎಂದು ಅಂಗಲಾಚಿದರೂ ಉಪಯೋಗವಾಗಿಲ್ಲ’ ಎಂದು ಎಂದು ನಿವಾಸಿಗಳಾದ ಹುಸೇನಬೀ ಪಿಂಜಾರ, ಮಾಬುಬೀ ಅವರು ದೂರುತ್ತಾರೆ.

‘ಇಲ್ಲಿ ಗೂಡಂಗಡಿಗಳ ಸಂಖ್ಯೆಯೂ ಹೆಚ್ಚಿದೆ. ರಥೋತ್ಸವ, ವಾರದಸಂತೆ, ಉಚ್ಛಾಯಗಳಿಗೆ ತೊಂದರೆಯಾಗುತ್ತಿದೆ ಎಂಬ ವಿಚಾರ ದೇವಸ್ಥಾನ ಸಮಿತಿಗೆ ಗೊತ್ತಿದೆ. ಆದರೂ ಇಲ್ಲಿ ಗೂಡಂಗಡಿಗೆ ಅನುಮತಿ ನೀಡಿದ್ದು ಸರಿಯಲ್ಲ’ ಎಂದು ಎ.ಪಿ.ಎಂ.ಸಿ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಹೇಳುತ್ತಾರೆ.

‘ನಿಯೋಜನೆ ಮೇಲೆ ತೆರಳಿದ್ದ ಕನಕಗಿರಿಯ ಉಪ ತಹಶೀಲ್ದಾರ್‌ ಚಂದ್ರಶೇಖರ ಚಿಕೊಪ್ಪ ಅವರು ಸೋಮವಾರ ಸೇವೆಗೆ ಹಾಜರಾಗು ತ್ತಾರೆ. ಕಚೇರಿ ಮುಂದಿನ ಗೂಡಂಗಡಿ ಗಳನ್ನು ತೆರವು ಗೊಳಿಸಲು ಸೂಚಿಸಲಾ ಗುವುದು. ಕಚೇರಿ ಆವರಣ ಕ್ರಿಕೆಟ್‌ ಆಟದ ಮೈದಾನವಾಗದಂತೆ ನೋಡಿ ಕೊಳ್ಳಲಾಗುವುದು’ ಎಂದು ತಹಶೀಲ್ದಾರ್‌ ಎಂ.ಗಂಗಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.