ADVERTISEMENT

`ಖುಷಿ ನೀಡಿದ ಬೇಸಿಗೆ ಶಿಬಿರ'

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 7:08 IST
Last Updated 6 ಏಪ್ರಿಲ್ 2013, 7:08 IST

ಹನುಮಸಾಗರ:  ವಿರಾಮ ವೇಳೆಯಲ್ಲಿ ಮಕ್ಕಳಿಗೆ ಹೆಚ್ಚಿನ ಜ್ಞಾನಾರ್ಜುನೆ ನೀಡುವುದಕ್ಕಾಗಿ ಆರಂಭಗೊಳ್ಳುವ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಂತಸದಾಯಕವಾಗಿರಲಿ ಎಂದು ಸಾಹಿತಿ ರಾಮಚಂದ್ರ ಬಡಿಗೇರ ಹೇಳಿದರು.

ಇಲ್ಲಿನ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಮಕ್ಕಳಿಗಾಗಿ ನಡೆದ ಎಕ್ಸಲೆಂಟ್ ಬೇಸಿಗೆ ಶಿಬಿರ ಉದ್ಘಾಟನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಯಾವುದೇ ಪಠ್ಯ, ಸಮವಸ್ತ್ರದ ಚೌಕಟ್ಟಿಲ್ಲದೆ ಬೋಧನೆ ನಡೆಸುವ ಇಂತಹ ಶಿಬಿರಗಳಿಂದ ಸಾಮಾನ್ಯ ಜ್ಞಾನವೆಲ್ಲ ಮಕ್ಕಳಿಗೆ ಸಿಗುವ ಸಾಧ್ಯತೆ ಇಲ್ಲಿರುತ್ತದೆ. ಮನರಂಜನೆಯೇ ಪ್ರಮುಖ ವಿಷಯವಾಗಿಟ್ಟುಕೊಂಡು ಆ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯೂ ನಡೆದರೆ ಶಿಬಿರ ಅರ್ಥಪೂರ್ಣವೆನಿಸುತ್ತದೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ಪ್ರಹ್ಲಾದ ಕಟ್ಟಿ ಮಾತನಾಡಿ ಮಕ್ಕಳಿಗೆ ಬಿಡುವು ದೊರೆತ ಈ ದಿನಗಳಲ್ಲಿ ಮತ್ತೆ ಕಲಿಕೆ, ಬರಹ ಎಂದು ಗೋಜಲು ಎನಿಸದಂತೆ ಅವರಿಗೆ ಆಕರ್ಷಕವಾಗಿರಲಿ, ಮಕ್ಕಳಿಗೆ ಶಾಲಾ ಚೌಕಟ್ಟು ಎಂಬ ಕಲ್ಪನೆ ಮೂಡದ ಹಾಗೆ ಕಲಿಕೆ ರಂಜನೆಯಾಗಿರಲಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ನಾಗೂರ ಮಾತನಾಡಿ ನಮ್ಮ ಸಂಸ್ಥೆಯ ಅಡಿಯಲ್ಲಿ ಕಳೆದ ವರ್ಷದಿಂದ ನಮ್ಮ ಗ್ರಾಮೀಣ ಮಕ್ಕಳಿಗೂ ಇಂತಹ ಶಿಬಿರದಿಂದ ಮಾಹಿತಿ ದೊರೆಯಲಿ ಎಂಬ ಉದ್ದೇಶದಿಂದ ಬೇಸಿಗೆ ಶಿಬಿರ ನಡೆಸುತ್ತಿದ್ದೇವೆ, ಕಳೆದ ವರ್ಷ ಪಾಲಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು.

ನಾರಾಯಣ ಚೌದರಿ ಮಾತನಾಡಿ ಬದಲಾದ ಬಿಸಿಲಿನ ವಾತಾವರಣಕ್ಕೆ ಸದ್ಯ ಮಕ್ಕಳನ್ನು ಬೇರೆಡೆಗೆ ಕಳಿಸುವಂತಿಲ್ಲದ ಕಾರಣ ಇಂತಹ ಶಿಬಿರಗಳಿಗೆ ಕಳಿಸಿದರೆ ಕಲಿಕೆಯ ಜೊತೆಗೆ ಮನರಂಜನೆಯೂ ದೊರಕುತ್ತದೆ ಎಂದು ಹೇಳಿದರು.ಡಾ.ಮಾರುತಿಸಾ ರಂಗ್ರೇಜ್ ಸರಸ್ವತಿ ಪೂಜೆಯೊಂದಿಗೆ ಶಿಬಿರ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಪ್ರಾಣೇಶ ಪಪ್ಪು ಇದ್ದರು. ರಮೇಶ ಅಂಬಿಗರ ಸ್ವಾಗತಿಸಿದರು. ಜಾಹ್ನವಿ ಪಪ್ಪು ಕಾರ್ಯಕ್ರಮ ನಿರೂಪಿಸಿದರು. ಸಾಬಣ್ಣ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.