ಕೊಪ್ಪಳ: 9 ತಿಂಗಳ ಗಂಡು ಮಗುವೊಂದನ್ನು ತಂದೆಯೇ ಮಾರಾಟ ಮಾಡಿದ್ದಾನೆ ಎನ್ನಲಾದ ಸಂಶಯಾಸ್ಪದ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಮಗುವಿನ ಮಾರಾಟಕ್ಕೆ ನೆರವಾಗಿದ್ದಾನೆ ಎನ್ನಲಾದ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡಿರುವ ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಈ ಮಗುವನ್ನು ಪತಿಯೇ ತೆಗೆದುಕೊಂಡು ಹೋಗಿದ್ದು, ಮಗುವನ್ನು ಹುಡುಕಿ ಕೊಡಿ ಎಂಬುದಾಗಿ ಮಗುವಿನ ತಾಯಿ ರೇಣುಕಾ ಎಂಬ ಮಹಿಳೆ ಸಹ ನಗರ ಠಾಣೆಗೆ ದೂರು ಸಲ್ಲಿಸಿದ್ದಾಳೆ.
ಘಟನೆ ವಿವರ: ತಾಲ್ಲೂಕಿನ ಬಸವರಾಜ ಹಿರೇಮನಿ ಮತ್ತು ರೇಣುಕಾ ಎಂಬ ದಂಪತಿ ಕಳೆದ ಕೆಲ ದಿನಗಳಿಂದ ಇಲ್ಲಿನ ಕಾಳಿದಾಸ ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಕೂಲಿಕಾರರಾದ ಈ ದಂಪತಿ ಟೆಂಟ್ನಲ್ಲಿ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಹನುಮೇಶ ಎಂಬ ಹೆಸರಿನ ಮಗು ನಾಪತ್ತೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಮಂಗಳವಾರ ಇಲ್ಲಿನ ನಗರ ಠಾಣೆಗೆ ದೂರು ನೀಡಿರುವ ರೇಣುಕಾ, ಪತಿ ಬಸವರಾಜ ಮಗುವನ್ನು ತೆಗೆದುಕೊಂಡು ಹೋಗಿದ್ದು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾಳೆ. ಆದರೆ, ಮಗುವನ್ನು ಮಾರಾಟ ಮಾಡಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಇದಕ್ಕೆ ರೇಣುಕಾ ನೀಡುತ್ತಿರುವ ಹೇಳಿಕೆಗಳು ಸಹ ಪುಷ್ಟಿ ನೀಡುವಂತಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾ, ತಮ್ಮ ಟೆಂಟ್ ಬಳಿಯೇ ವಾಸವಾಗಿದ್ದ ಬಸವರಾಜ ಬಾರಕೇರ ಎಂಬ ವ್ಯಕ್ತಿ ಕೆಲ ದಿನಗಳ ಹಿಂದೆ ಪತಿಯೊಂದಿಗೆ ಮಾತನಾಡಿದ್ದನ್ನು ಕೇಳಿಸಿಕೊಂಡಿರುವುದಾಗಿ ಹೇಳಿದಳು. ಹುಬ್ಬಳ್ಳಿಯಲ್ಲಿರುವ ಶ್ರೀಮಂತ ವ್ಯಕ್ತಿಯೊಬ್ಬರಿಗೆ ಮಕ್ಕಳು ಇಲ್ಲ. ಗಂಡು ಮಗುವನ್ನು ನೀಡಿದರೆ, ಸಾಕಷ್ಟು ಹಣ ನೀಡುತ್ತಾರೆ ಎಂಬುದಾಗಿ ಸಹ ಹೇಳುತ್ತಿದ್ದ. ಹೀಗಾಗಿ ಪತಿ ಮತ್ತು ಬಸವರಾಜ ಬಾರಕೇರ ತನ್ನ ಮಗುವನ್ನು ಮಾರಾಟ ಮಾಡಿರಬಹುದು ಎಂದೂ ಆಪಾದಿಸಿದಳು.
ರೇಣುಕಾ ಹೇಳಿಕೆ ಹಿನ್ನೆಲೆಯಲ್ಲಿ ಬಸವರಾಜ ಬಾರಕೇರನನ್ನು ವಶಕ್ಕೆ ತೆಗೆದುಕೊಂಡಿರುವ ನಗರ ಠಾಣೆ ಪೊಲೀಸರು ವಿಚಾರಣೆಯನ್ನು ನಡೆಸಿದ್ದಾರೆ. ಈ ನಡುವೆ ಸ್ಥಳಕ್ಕೆ ಆಗಮಿಸಿದ್ದ ಬಸವರಾಜ ಬಾರಕೇರನ ಪತ್ನಿ ರೇಖಾ ಎಂಬ ಮಹಿಳೆಯನ್ನೂ ಸುದ್ದಿಗಾರರು ಮಾತನಾಡಿಸಿದಾಗ, ಎರಡು ಗಂಡು ಮತ್ತು ಒಂದು ಹೆಣ್ಣು ಮಗುವನ್ನು ಸಾಕುತ್ತಿದ್ದುದಾಗಿ ಹೇಳಿದಳು. ಅಲ್ಲದೇ, ಹೆಣ್ಣು ಮಗುವನ್ನು 6 ವರ್ಷಗಳ ಹಿಂದೆ ಶಾಸಕ ಸಂಗಣ್ಣ ಕರಡಿ ಅವರೇ ನೀಡಿದ್ದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.