ADVERTISEMENT

ಡಿ.7ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:10 IST
Last Updated 4 ಡಿಸೆಂಬರ್ 2012, 6:10 IST

ಕೊಪ್ಪಳ: ರಾಜ್ಯದಲ್ಲಿ ಸುಮಾರು 80 ಲಕ್ಷ ಜನಂಖ್ಯೆ ಹೊಂದಿರುವ ಲಿಂಗಾಯತ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2 ಎ ಮೀಸಲಾತಿ ವ್ಯಾಪ್ತಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಡಿ.7ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ವರೆಗೆ ಬೃಹತ್ ಪಾದಯಾತ್ರೆ ಕೈಗೊಳ್ಳುವುದಾಗಿ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜ ಸ್ವಾಮೀಜಿ ಸೋಮವಾರ ಇಲ್ಲಿ ಹೇಳಿದರು.

ಜ.ಚ.ನಿ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ.4 ವೀರರಾಣಿ ಕಿತ್ತೂರಚನ್ನಮ್ಮನ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ, ಅದರಲ್ಲಿ 16 ಜನ ಶಾಸಕರು, ಸಮಾಜದ ಮುಖಂಡರು ಸೇರಿದಂತೆ ಸಾಕಷ್ಟು ಜನ ಪಾಲ್ಗೊಳ್ಳಲಿದ್ದಾರೆ ಎಂದರು.

ಪಂಚಮಸಾಲಿ ಸಮಾಜ ಮೂಲ ಕೃಷಿಕ ಸಮಾಜವಾಗಿದ್ದು ಆರ್ಥಿಕ ದೃಷ್ಟಿಯಿಂದ ಸಾಕಷ್ಟು ಹಿಂದುಳಿದಿದ್ದರೂ ಸರ್ಕಾರದಿಂದ ಯಾವ ಸೌಲಭ್ಯಗಳೂ ದೊರೆಯುತ್ತಿಲ್ಲ, ಸಮಾಜ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ ಮೀಸಲಾತಿ ಸೌಲಭ್ಯವಿಲ್ಲ ಉನ್ನತ ವ್ಯಾಸಂಗ ಮತ್ತು ಸರ್ಕಾರಿ ಉದ್ಯೋಗ ವಂಚಿತರಾಗಿದ್ದಾರೆ. ಲಿಂಗಾಯತ ಧರ್ಮದ ಅನೇಕ ಸಮಾಜಗಳಿಗೆ ಸರ್ಕಾರ 2 ಎ ಮೀಸಲಾತಿ ನೀಡಿರುವುದು ಸರಿ, ಅದೇ ರೀತಿ ಪಂಚಮಸಾಲಿ ಸಮಾಜಕ್ಕೆ ಸದರಿ ಮೀಸಲಾತಿ ಪಟ್ಟಿಯಲ್ಲಿ ಅವಕಾಶ ನೀಡುವಂತೆ ಕೋರಿ ಕಳೆದ ಹತ್ತು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದರೂ ಯಾವುದೇ ಸರ್ಕಾರಗಳು ಈ ವಿಷಯದತ್ತ ಗಮನಹರಿಸಿಲ್ಲ ಎಂದು ಸ್ವಾಮೀಜಿ ವಿಷಾದಿಸಿದರು.

ಈ ನಿಟ್ಟಿನಲ್ಲಿ ಸರ್ಕಾರದ ಕಣ್ಣುತೆರೆಸುವುದು ಅನಿವಾರ್ಯವಾಗಿರುವುದರಿಂದ ಇದೇ ಮೊದಲಬಾರಿಗೆ ಸುವರ್ಣ ವಿಧಾನಸೌಧಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಈ ಹಕ್ಕೊತ್ತಾಯವನ್ನು ಮಂಡಿಸಲುವ ಸಲುವಾಗಿ ಪಂಚಸಾಲಿ ಸಮಾಜದ ಪ್ರಮುಖರು, ವಿವಿಧ ಕ್ಷೇತ್ರಗಳ ಮುಖಂಡರು, ಚುನಾಯಿತ ಪ್ರತಿನಿಧಿಗಳು ಹಾಗೂ ಯುವ ಸಂಘಟನೆಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವಲಿಂಗಪ್ಪ ಲಾಡಿ, ರಾಜಶೇಖರ ಮೆಣಸಿನಕಾಯಿ, ಈರಣ್ಣ ಇಂದರಗಿ, ಡಾ.ಶಿವಾನಂದ ಹೊಸಪೇಟೆ, ಅಂದಪ್ಪ ಅಬ್ಬಿಗೇರಿ, ಪಂಪನಗೌಡ ಪಾಟೀಲ, ದೇವರಾಜ ಹಾಲಸಮುದ್ರ, ವೀರಣ್ಣ ಹಂಚಿನಾಳ, ಕೊಟ್ರಪ್ಪ ತೊಟದ, ಗಿರೀಶ್ ಕಣವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.