ADVERTISEMENT

ತಳವೂರಿದ ಸಿಬ್ಬಂದಿ ಪ್ರಜಾವಾಣಿ ವರದಿ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 6:35 IST
Last Updated 11 ಫೆಬ್ರುವರಿ 2012, 6:35 IST

ಕುಷ್ಟಗಿ: ಅವಧಿ ಮೀರಿದರೂ ಸಹ ಪಟ್ಟಣದ ಪ್ರಮುಖ ಇಲಾಖೆಗಳಲ್ಲಿ ಬಹುತೇಕ ಸಿಬ್ಬಂದಿ ದಶಕಗಳಿಂದಲೂ ಒಂದೇ ಸ್ಥಳದಲ್ಲಿ ತಳವೂರಿದ ರಾಜ್ಯ ಸರ್ಕಾರಿ ಸಿಬ್ಬಂದಿಯ ವರ್ಗಾವಣೆಗೆ ಸರ್ಕಾರ ಕ್ರಮ ಕೈಗೊಂಡಿರುವುದು ಗೊತ್ತಾಗಿದೆ.

ಈ ವಿಷಯ ಕುರಿತಂತೆ ವಿವಿಧ ಇಲಾಖೆಗಳ ಆಯಕಟ್ಟಿನ ಜಾಗೆಗಳಲ್ಲಿ ಸಿಬ್ಬಂದಿ ಅನೇಕ ವರ್ಷಗಳಿಂದಲೂ ಉಳಿದುಕೊಂಡಿರುವುದಕ್ಕೆ ಸಂಬಂಧಿಸಿದ `ಪ್ರಜಾವಾಣಿ~ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಕ್ರಮಕ್ಕೆ ಮುಂದಾಗಿದ್ದು ಇಲ್ಲಿಯ ಸಣ್ಣ ನೀರಾವರಿ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿರುವ ಇಬ್ಬರು ಪ್ರಮುಖ ಸಿಬ್ಬಂದಿಯನ್ನು ಬಳ್ಳಾರಿ ಜಿಲ್ಲೆಗೆ ಎತ್ತಗಂಡಿ ಮಾಡಿ ಆದೇಶ ಹೊರಡಿಸಿದೆ ಎಂಬುದು ಖಚಿತ ಮೂಲಗಳಿಂದ ಗೊತ್ತಾಗಿದೆ.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶಕರು ಹೊರಡಿಸಿರುವ ವರ್ಗಾವಣೆ ಆದೇಶ ಇನ್ನೂ ಕೈಸೇರುವ ಮೊದಲೇ ಜಾಗೃತಗೊಂಡಿರುವ ಸಿಬ್ಬಂದಿ ರಾಜಕೀಯ ಪ್ರಭಾವ ಬಳಸಿ ಆದೇಶವನ್ನು ರದ್ದುಪಡಿಸುವ ನಿಟ್ಟಿನಲ್ಲಿ ತೀವ್ರ ಪ್ರಯತ್ನ ನಡೆಸಿದ್ದು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ ಎನ್ನಲಾಗಿದೆ. ಆದರೆ ಅನೇಕ ಬಾರಿ ಇಲಾಖೆ ಬಡ್ತಿ ನೀಡಿದರೂ ಅದನ್ನು ತಿರಸ್ಕರಿಸಿ ಇದ್ದ ಸ್ಥಳದಲ್ಲೇ ಮುಂದುವರೆದಿರುವುದನ್ನು ನಿರ್ದೇಶರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿದಿದೆ.

ಲೋಕೋಪಯೋಗಿ, ಕಂದಾಯ, ತಾಲ್ಲೂಕು ಪಂಚಾಯಿತಿ, ಪಂಚಾಯತ್‌ರಾಜ್ ಎಂಜಿನಿಯರಿಂಗ್, ಶಿಕ್ಷಣ ಇಲಾಖೆಗಳಲ್ಲಿಯೂ ಅವಧಿ ಮೀರಿದ ಇಂಥ ಅನೇಕ ನೌಕರರು ರಾಜಕೀಯ ಪ್ರಭಾವದಿಂದ ತಳ ಗಟ್ಟಿಮಾಡಿಕೊಂಡಿದ್ದು ಈ ಬಗ್ಗೆ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆ ಮುಖ್ಯಸ್ಥರು ಯಾವ ಕ್ರಮ ಜರುಗಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.