ಗಂಗಾವತಿ: ದೇಶದ ರಕ್ಷಣೆ, ಅಭಿವೃದ್ಧಿ ವಿಚಾರಕ್ಕೆ ಈ ಬಾರಿ ಬಹುತೇಕ ಜನ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ.
ಈ ಬಾರಿ ದೇಶದಲ್ಲಿ ಬಿಜೆಪಿ ಪರ ಬಹುದೊಡ್ಡ ಅಲೆ ನಿರ್ಮಾಣವಾಗಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಕನಕಗಿರಿ ರಸ್ತೆಯಲ್ಲಿರುವ ವೀರಶೆಟ್ಟಿ ಬಸಪ್ಪ ರೈಸ್ಮಿಲ್ನಲ್ಲಿ ಶನಿವಾರ ಸಂಜೆ ನಡೆದ ಪಕ್ಷದ ಕಾರ್ಯಕರ್ತರ ಮತ್ತು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಮೋದಿ ನೇತೃತ್ವದಲ್ಲಿನ ಬಿಜೆಪಿ ಪಕ್ಷ ಮತದಾರರಿಗೆ ಅನಿವಾರ್ಯ ಎಂಬ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ.
ಕೇಂದ್ರದಲ್ಲಿನ ಯುಪಿಎ –2 ಅಧಿಯಲ್ಲಾದ ಬಹುಕೋಟಿ ಮೊತ್ತದ ಭ್ರಷ್ಟಾಚಾರ ಮತ್ತು ರಾಜ್ಯದಲ್ಲಿ ಅಧಿ-ಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಹನ್ನೊಂದು ತಿಂಗಳಿಂದ ಜನರಿಗೆ ಯಾವುದೇ ಉತ್ತಮವಾದ ಯೋಜನೆ ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಈ ಬಾರಿ ಮೋದಿ ಅಲೆ ದೇಶದಾದ್ಯಂತ ಹಿರಿ–ಕಿರಿಯರನ್ನು ಸೆಳೆದಿದೆ ಎಂದರು. ಬಸವರಾಜ ದಢೇಸಗೂರು ಮಾತನಾಡಿ, ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿಗೆ ರಾಜಕೀಯ ಜೀವನ ಕಲ್ಪಿಸಿದ ಬಿಜೆಪಿಯನ್ನು ನಿತ್ಯ ಸ್ಮರಿಸಿಕೊಂಡು ದೀಪ ಹಚ್ಚಬೇಕು ಎಂದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ಮೂರು ಬಾರಿ ಸಿಎಂ ಆಗಿದ್ದರೂ ಮೋದಿ ಕುಟುಂಬಿಕರು ಇಂದಿಗೂ ಸಾಮಾನ್ಯರಂತೆ ಜೀವನ ನಿರ್ವಹಿಸುತ್ತಾರೆ. ಕೇವಲ ಐದು ವರ್ಷದಲ್ಲಿ ಸಚಿವ ತಂಗಡಗಿ ಆಸ್ತಿ ನೂರಾರು ಕೋಟಿಗೇರಿದೆ. ಇಂತ ಭ್ರಷ್ಟರು ರಾಜಕೀಯದಲ್ಲಿ ಇರಬೇಕೆ? ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಸೋಮಲಿಂಗಪ್ಪ ಮಾತನಾಡಿದರು. ಮುಖಂಡರಾದ ಎಚ್.ಗಿರೇಗೌಡ, ಕೊಲ್ಲಾ ಶೇಷಗಿರಿ ರಾವ್, ತಿಪ್ಪೇರುದ್ರಸ್ವಾಮಿ, ಮನೋಹರಗೌಡ, ಬಿ.ಎಸ್. ಹಂದ್ರಾಳ್, ಜೆ.ಕೆ. ನಾಯಕ್, ರಾಜಶೇಖರ ಪಾಟೀಲ್, ವೆಂಕನಗೌಡ ಪಾಟೀಲ್, ಸಿದ್ದರಾ-ಮಯ್ಯಸ್ವಾಮಿ ಮೊದಲಾದವರಿದ್ದರು.
ಇದಕ್ಕೂ ಮೊದಲು ಬಸವಪಟ್ಟಣ ಹಾಗೂ ಆನೆಗೊಂದಿಯಲ್ಲಿ ಬಿಜೆಪಿ ನಾಯಕರು ಅಭ್ಯರ್ಥಿಯೊಂದಿಗೆ ತೆರಳಿ ಮತಯಾಚಿಸಿದರು. ಗಂಗಾವತಿ ಕಾರ್ಯಕ್ರಮಕ್ಕೆ ಸಂಸದ ಶಿವರಾಮಗೌಡ ಬರುತ್ತಾರೆಂದು ಮುಖಂಡರು ಹೇಳಿಕೆ ನೀಡಿದ್ದರು. ಆದರೆ ಸಂಸದ ಸಭೆಯಿಂದ ದೂರ ಉಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.