ADVERTISEMENT

‘ನೀರಾವರಿ ಯೋಜನೆಗೆ ₹2,396 ಕೋಟಿ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 9:40 IST
Last Updated 20 ನವೆಂಬರ್ 2017, 9:40 IST

ಯಲಬುರ್ಗಾ: ಕೃಷ್ಣಾ ಬಿ ಸ್ಕೀಮ್ ನೀರಾವರಿ ಯೋಜನೆಗೆ 2,396 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯಿತ್ತಿದೆ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ತಾಲ್ಲೂಕಿನ ಹಿರೇಅರಳಿಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

₹290 ಕೋಟಿ ವೆಚ್ಚದಲ್ಲಿ ಶಿವಪುರದ ಮಾರ್ಕಂಡಯ್ಯ ದೇವಸ್ಥಾನದ ಬಳಿ ಇರುವ ನದಿಯಿಂದ ತಾಲ್ಲೂಕಿನ 36 ಕೆರೆಗಳನ್ನು ತುಂಬಿಸಲಾಗುವುದು ಎಂದರು. ₹90 ಲಕ್ಷ ವೆಚ್ಚದಲ್ಲಿ ಹಿರೇಅರಳಿಹಳ್ಳಿ-ಬೀರಲದಿನ್ನಿ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಹೇಳಿದರು.

ಸರಿಯಾದ ವಿದ್ಯುತ್ ಪೂರೈಕೆ ಇಲ್ಲದ ಕಾರಣ ರೈತರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳಬೇಕು ಎಂಬ ಗ್ರಾಮಸ್ಥರ ಒತ್ತಾಯಕ್ಕೆ ಸ್ಪಂದಿಸಿದ ಸಚಿವರು, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದ್ದು, 3 ಪೇಸ್ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗೆ ಸೂಚಿಸಿದರು.

ADVERTISEMENT

ಲೋಕೊಪಯೋಗಿ ಇಲಾಖೆಯ ಅಧಿಕಾರಿ ಉಮಾಪತಿ ಶೆಟ್ಟರ್, ಭೂಸೇನಾ ನಿಗಮದ ಜಯಣ್ಣ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡ ನಾಗರಾಜ ಕೊಳಜಿ, ಜಿ.ಪಂ ಸದಸ್ಯೆ ಗಿರಿಜಾ ರೇವಣಪ್ಪ ಸಂಗಟಿ, ಮುಖಂಡ ಶರಣಗೌಡ ಪಾಟೀಲ, ಅಯ್ಯಪ್ಪ ಗುಳೆ, ರಾಮಣ್ಣ ಸಾಲಭಾವಿ, ಕಮಲಮ್ಮ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ತಿಮ್ಮಪ್ಪ. ಎಸ್. ಭಜಂತ್ರಿ, ತಿಪ್ಪಣ್ಣ ತಳಕಲ್ಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.