ADVERTISEMENT

ಪಶು ಚಿಕಿತ್ಸಾ ಕೇಂದ್ರದ ಸಿಬ್ಬಂದಿ ಬೇಜವಾಬ್ದಾರಿತನ......

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2011, 9:55 IST
Last Updated 29 ಆಗಸ್ಟ್ 2011, 9:55 IST
ಪಶು ಚಿಕಿತ್ಸಾ ಕೇಂದ್ರದ ಸಿಬ್ಬಂದಿ ಬೇಜವಾಬ್ದಾರಿತನ......
ಪಶು ಚಿಕಿತ್ಸಾ ಕೇಂದ್ರದ ಸಿಬ್ಬಂದಿ ಬೇಜವಾಬ್ದಾರಿತನ......   

ಯಲಬುರ್ಗಾ: ಸ್ಥಳೀಯ ಪಶು ಸಂಗೋಪನೆ ಇಲಾಖೆ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ. ರಜೆ ದಿನಗಳಂತೂ ಒಮ್ಮೆಯೂ ಆಸ್ಪತ್ರೆ ತೆರೆಯುವುದಿಲ್ಲ.

ಇದರಿಂದ ಜಾನುವಾರುಗಳನ್ನು ಹೊಂದಿರುವ ರೈತಾಪಿ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಕನಕ ಯುವಸೇನೆ ಅಧ್ಯಕ್ಷ ಬಸವರಾಜ ಕುಡಗುಂಟಿ, ರೈತ ಶರಣಪ್ಪ ಭಜಂತ್ರಿ, ಈಶಪ್ಪ ಹಳ್ಳಿ, ಪರಸಪ್ಪ ಲಮಾಣಿ ಹಾಗೂ ಇತರರು ದೂರಿದ್ದಾರೆ.

ಶನಿವಾರವೇ ಕಚೇರಿ ಬಂದ್ ಮಾಡಿ ಊರಿಗೆ ಹೋಗುವ ಇಲ್ಲಿಯ ಸಿಬ್ಬಂದಿ ಮಂಗಳವಾರದವರೆಗೂ ಹೋಗುತ್ತಾರೆ. ರಜಾದಿನವು ಕೂಡಾ ಬೆಳಿಗ್ಗೆ 8ರಿಂದ ಮಧ್ಯಾಹ್ನ12ರವರೆಗೆ ಕಾರ್ಯನಿರ್ವಹಿಸ ಬೇಕಾದುದು ಕಚೇರಿ ನಿಯಮವಿದ್ದರೂ ಅದನ್ನು ಯಾವತ್ತು ಪಾಲಿಸಿಲ್ಲ.

ಮೇಲಾಗಿ ಪಟ್ಟಣದಲ್ಲಿ ಖಾಸಗಿ ಪಶು ಚಿಕಿತ್ಸಾ ಕೇಂದ್ರವಾಗಲಿ, ಪಶು ಔಷಧಿ ದೊರೆಯುವ ಕೇಂದ್ರವಾಗಲಿ ಇರದೇ ಇರುವ ಕಾರಣ ಸುತ್ತಮುತ್ತಲಿನ ಹಳ್ಳಿಯ ಜನರ ತಮ್ಮ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ   ಸಂಕಷ್ಟ ಎದುರಿಸುವಂತಾಗಿದೆ ಎಂದಿದ್ದಾರೆ.

ಜಾನುವಾರುಗಳ ಕಾಲು ಮುರಿದಾಗ ಅಥವಾ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲೂ ಕೂಡಾ ಸ್ಥಳಕ್ಕೆ ಭೇಟಿ ನೀಡಲು ನಿರಾಕರಿಸಿ ಜಾನುವಾರುಗಳೊಂದಿಗೆ ಆಸ್ಪತ್ರೆಗೆ ತರುವಂತೆ ಹೇಳುತ್ತಾರೆ. ಸರ್ಕಾರದಿಂದ ಒಂದು ಜೀಪು ಒದಗಿಸಿದ್ದರೂ ಜಾನುವಾರುಗಳ ಚಿಕಿತ್ಸೆಗೆ ಅನುಕೂಲವಾಗಲು ಬಳಸಿಕೊಳ್ಳದೆ ಬರೀ ದುರ್ಬಳಕೆಗೆ ಮೀಸಲಿದ್ದಂತಿದೆ.

ಬೆಳಗಾವಿ ಮತ್ತು ಮಹಾರಾಷ್ಟ್ರ ಮೂಲದ ಕುರಿಗಾರರಿಗೆ ಹೆಚ್ಚಿನ ಬೆಲೆಗೆ ಪಶು ಔಷಧಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ವೈದ್ಯಾಧಿಕಾರಿಗಳು ರೈತರ ಹಾಗೂ ಜಾನುವಾರುಗಳ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.

ಇದರಿಂದಾಗಿ ತಾಲ್ಲೂಕಿನಲ್ಲಿ ಜಾನುವಾರುಗಳ ಮರಣ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಸಾಕಷ್ಟು ಸಲ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.