ADVERTISEMENT

ಬಜೆಟ್‌ನಲ್ಲಿ ನಿಧಿ ಮೀಸಲಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 10:27 IST
Last Updated 11 ಜುಲೈ 2013, 10:27 IST

ಕೊಪ್ಪಳ: ದಲಿತರ ಅಭ್ಯುದಯಕ್ಕಾಗಿ ಬಜೆಟ್‌ನಲ್ಲಿ ಶೇ 25ರಷ್ಟು ನಿಧಿ ಮೀಸಲಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಯೋಜನಾ ಆಯೋಗದ ನಿರ್ದೇಶನದಂತೆ ಈ ನಿಧಿ ಮೀಸಲಿರಿಸಬೇಕು. ಅದು ಸದುದ್ದೇಶಕ್ಕೆ ಬಳಕೆ ಆಗುವಂತೆ ವಿಶೇಷ ಯೋಜನೆ ರೂಪಿಸಬೇಕು. ಸಮಾನ ಶಿಕ್ಷಣ ನೀತಿ ಜಾರಿಗೊಳಿಸಬೇಕು. ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ದಲಿತರಿಗೆ ಖಾಸಗಿ ಕ್ಷೇತ್ರಗಳಲ್ಲಿಯೂ ಉದ್ಯೋಗ ಮೀಸಲಾತಿ ನೀಡಬೇಕು.

ದಲಿತ ಮತ್ತು ಅಲ್ಪಸಂಖ್ಯಾತರಿಗೆ ವಹಿಸುವ ಗುತ್ತಿಗೆ ಮತ್ತು ಸರಬರಾಜು ನೀತಿ ಅಡಿ ಮೊತ್ತವನ್ನು ರೂ1 ಲಕ್ಷದ ಬದಲು 25 ಲಕ್ಷಕ್ಕೆ ಏರಿಸಬೇಕು. ದಲಿತ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಹಾಸ್ಟೆಲ್ ವೆಚ್ಚವನ್ನು ಮಾಸಿಕ ಕನಿಷ್ಠ ರೂ 2 ಸಾವಿರಕ್ಕೆ ಏರಿಸಬೇಕು. ಹಾಸ್ಟೆಲ್ ಆಧುನೀಕರಣಗೊಳಿಸಬೇಕು. ಭೂಸುಧಾರಣಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಮುಖಂಡರು ಒತ್ತಾಯಿಸಿದರು.

ಅಸ್ಪಶ್ಯತೆ ನಿಲ್ಲಬೇಕು. ದಲಿತರು ಮತ್ತು ಹಿಂದುಳಿದವರಿಗೆ ಸಾಲ ನೀಡುವ ಪ್ರಕ್ರಿಯೆಯಲ್ಲಿ ಫಲಾನುಭವಿಗಳ ಆಯ್ಕೆಗೆ ಅಧಿಕಾರಿಗಳ ಸಮಿತಿ ನೇಮಿಸಬೇಕು.  ಆ ಅಧಿಕಾರ ಶಾಸಕರಿಗೆ ಇರಬಾರದು. ನಿರುದ್ಯೋಗ ಭತ್ಯೆ ನೀಡಬೇಕು. ಪರಿಶಿಷ್ಟರಿಗೆ ಭೂಮಿ ಪುನರ್‌ಮಂಜೂರು ಮಾಡಬೇಕು. ಬುದ್ಧ ಜಯಂತಿಯಂದು ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಜಿ.ಹಂಪೇಶ್ ಹರಿಗೋಲ್, ಮುಖಂಡರಾದ ಹನುಮಂತಪ್ಪ ನಾಯಕ ವಡರಹಟ್ಟಿ, ಟಿ.ಕೃಷ್ಣಪ್ಪ ಹೆಗಡೆ, ಕೆ.ವೆಂಕಟೇಶ್ ನಿರುಲೂಟಿ, ಪರಶುರಾಮ ಕಟ್ಟಿಮನಿ, ಸಣ್ಣಬಾಲಪ್ಪ ಎಂ. ರಾಂಪುರ, ಪ್ರಕಾಶ್ ಬಡಿಗೇರ, ಹನುಮಂತ ಬಸಿರಿಗಿಡದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.