ADVERTISEMENT

ಬರದಲ್ಲೂ ಬದುಕು ನೀಡಿದ ಬಾರೆಹಣ್ಣು

ಮೆಣೇದಾಳ: 2 ಎಕರೆಯಲ್ಲಿ ಬಾರೆಹಣ್ಣು ಬೆಳೆದ ರೈತ ರಾಮರಾವ ರೆಡ್ಡಿ, ಅಧಿಕ ಆದಾಯ

ಕೆ.ಶರಣಬಸವ ನವಲಹಳ್ಳಿ
Published 31 ಡಿಸೆಂಬರ್ 2017, 11:37 IST
Last Updated 31 ಡಿಸೆಂಬರ್ 2017, 11:37 IST
ಬರದಲ್ಲೂ ಬದುಕು ನೀಡಿದ ಬಾರೆಹಣ್ಣು
ಬರದಲ್ಲೂ ಬದುಕು ನೀಡಿದ ಬಾರೆಹಣ್ಣು   

ತಾವರಗೇರಾ: ಎಂಟು ವರ್ಷದಿಂದ ಆದಾಯದ ಕೊರತೆ ಅನುಭವಿಸಿದ್ದ ಮೆಣೇದಾಳ ಗ್ರಾಮದ ರೈತ ರಾಮರಾವ ರೆಡ್ಡಿ ಅವರು ತಮ್ಮ 2 ಎಕರೆ ಭೂಮಿಯಲ್ಲಿ ಬಾರೆಹಣ್ಣು ಬೆಳೆದು ಉತ್ತಮ ಅಧಿಕ ಆದಾಯ ಪಡೆದಿದ್ದಾರೆ.

ಮಳೆ ಕೊರತೆ, ಕೀಟಭಾದೆ , ಅಂತರ್ಜಲ ಕೊರತೆಯಿಂದ ವಾಣಿಜ್ಯ ಬೆಳೆ ಬೆಳೆಯಲು ಹಿಂಜರಿಯುತ್ತಿದ್ದ ಸಮಯದಲ್ಲಿ, ರಾಮರಾವ ರೆಡ್ಡಿ ಒಂದು ವರ್ಷದಲ್ಲಿ ₹1 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ್ದಾರೆ.

ತಾವರಗೇರಾ ಸಮೀಪದ ಮೆಣೇದಾಳ ಗ್ರಾಮದ ಮುಖ್ಯ ರಸ್ತೆಯಲ್ಲಿ ಇರುವ ಹೊಲದಲ್ಲಿ 2 ಎಕರೆ ಜಮೀನಿನಲ್ಲಿ 600 ಸಸಿಗಳನ್ನು ನಾಟಿ ಮಾಡಿದ್ದೆ. ಆರಂಭದಲ್ಲಿ ಮಳೆ ಕೊರತೆ ಎದುರಾಯಿತು. ನಂತರ ಚೆನ್ನಾಗಿ ಮಳೆ ಆಯಿತು. ಇದರಿಂದ ಬೆಳೆಗೆ ಸಹಾಯವಾಯಿತು ಎನ್ನುತ್ತಾರೆ ರಾಮರಾವ ರೆಡ್ಡಿ.

ADVERTISEMENT

ಇತ್ತಿಚಿನ ದಿನಗಳಲ್ಲಿ ಸಾಕಷ್ಟು ರೈತರು ಕೃಷಿಯಿಂದ ನಷ್ಟ ಅನುಭವಿಸಿದ್ದಾರೆ. ಬೆಳೆಗಾಗಿ ತಂದ ಸಾಲದ ಹಣ ಮರುಪಾವತಿ ಮಾಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸಿದ ರೈತರು ಸಾಕಷ್ಟು ಇದ್ದಾರೆ. ಹೀಗಿದ್ದರೂ ರಾಮರಾವ ಅವರು ಬಾರೆಹಣ್ಣಿನ ಬೆಳೆಯಿಂದ ಆದಾಯ ಪಡೆದು, ರೈತರು ಕೃಷಿ ಕಾಯಕಕ್ಕೆ ಮರಳುವಂತೆ ಮಾಡಿದ್ದಾರೆ.

600 ಗಿಡದಲ್ಲಿ ಕಟಾವಿಗೆ ಬಂದಿರುವ ಹಣ್ಣಿನ ಮಾರಾಟಕ್ಕಾಗಿ ಗುತ್ತಿಗೆದಾರರೊಂದಿಗೆ ಮಾತನಾಡಿದಾಗ ಕೇವಲ ₹30 ಸಾವಿರ ಕೇಳಿದ್ದರು. ಹೀಗಾಗಿ ನಾನೇ ಮಾರಾಟ ಮಾಡಲು ನಿರ್ಧರಿಸಿದೆ. ಈಗಾಗಲೆ ₹1.50 ಲಕ್ಷ ಆದಾಯ ಬಂದಿದೆ. ಮಾರುಕಟ್ಟೆಯಲ್ಲಿ ಒಂದು ಕೇಜಿಗೆ ₹20 ಇದೆ. ಜಮೀನಿನಲ್ಲಿ ಖರೀದಿಸಿದರೆ ₹15 ಎಂದು ರಾಮರಾವ ಹೇಳಿದರು.

***

ನಾನು ಬೆಳೆದ ಬಾರೆಹಣ್ಣಿಗೆ ಬೇಡಿಕೆ ಜಾಸ್ತಿ ಇದೆ. ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ₹15 ರಿಂದ 20 ಸಿಕ್ಕಿದೆ. ಬರದಲ್ಲೂ ಫಸಲು ಉತ್ತಮವಾಗಿದೆ
–ರಾಮರಾವ ರೆಡ್ಡಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.