ADVERTISEMENT

ಮುನಿರಾಬಾದ್‌: ರೈತರ ತರಬೇತಿ ಆರಂಭ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 9:23 IST
Last Updated 30 ಡಿಸೆಂಬರ್ 2017, 9:23 IST

ಮುನಿರಾಬಾದ್‌: ಇಲ್ಲಿನ ತೋಟಗಾರಿಕೆ ಕಾಲೇಜಿನಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಸ್ಥಳೀಯ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಪ್ರಶಸ್ತಿ ಪುರಸ್ಕೃತ ರೈತರು, ಕಾಲೇಜಿನ ಡೀನ್‌ ಡಾ.ಪಿ.ಎಂ.ಗಂಗಾಧರಪ್ಪ ಗುರುವಾರ ಉದ್ಘಾಟಿಸಿದರು.

ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಡಾ.ಎನ್‌.ಜಗದೀಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿ ಹೊಂದಿರುವ ‘ಶ್ರೇಷ್ಠ ರೈತ’ ಪ್ರಶಸ್ತಿ ಪುರಸ್ಕೃತ ರೈತರ ಜೊತೆ ಸಂವಾದ ಮತ್ತು ಅವರ ತೋಟ–ಗದ್ದೆಗಳಿಗೆ ತೆರಳಿ ಅಲ್ಲಿಯೇ ಪ್ರತ್ಯಕ್ಷ ಮಾಹಿತಿ ಸಂಗ್ರಹಿಸುವ ‘ಕ್ಷೇತ್ರಭೇಟಿ’ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇದಾಗಿದೆ’ ಎಂದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪಿ.ಕೆ.ಶ್ರೀಧರ್‌ ಮಾತನಾಡಿ, ‘ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ನಡೆಯುವ ಹಲವು ತಂತ್ರಜ್ಞಾನ ಪ್ರಯೋಗಗಳು ಪ್ರಯೋಗಶಾಲೆಗೆ ಮಾತ್ರ ಸೀಮಿತವಾಗಿದ್ದವು. ಅದನ್ನು ರೈತರಿಗೆ ತಲುಪಿಸಲು ಇಲಾಖೆ ಮುಂದಾಗಿದೆ. ನೀರಿನ ಮಿತ ಬಳಕೆ, ಮಣ್ಣಿನ ಆರೋಗ್ಯ ರಕ್ಷಣೆ ವಿಷಯದಲ್ಲಿ ಸಾಕಷ್ಟು ಸಂಶೋಧನೆಗಳಾಗಿವೆ. ರೈತರು ಇದರ ಪ್ರಯೋಜನವನ್ನು ಪಡೆಯುವಂತೆ’ ಸಲಹೆ ನೀಡಿದರು.

ADVERTISEMENT

ಕಾಲೇಜಿನ ಡೀನ್‌ ಡಾ.ಪಿ.ಎಂ.ಗಂಗಾಧರಪ್ಪ ಮಾತನಾಡಿ, ‘ಕಾಲೇಜು ವ್ಯಾಪ್ತಿಯ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯಿಂದ ಒಟ್ಟು ಎಂಟು ರೈತರಿಗೆ ಪ್ರಶಸ್ತಿ ನೀಡಲಾಗಿದೆ. ನಾವು ಶೈಕ್ಷಣಿಕವಾಗಿ ಓದಿ ವಿಜ್ಞಾನಿಗಳಾದರೆ, ಈ ರೈತರು ತಮ್ಮ ಹೊಲದಲ್ಲಿ ಪ್ರಯೋಗ ಮಾಡಿ ವಿಜ್ಞಾನಿಗಳಾಗಿದ್ದಾರೆ’ ಎಂದರು.

ವಿದ್ಯಾರ್ಥಿಗಳು ಪದವಿ ಮುಗಿದ ತಕ್ಷಣ ನೌಕರಿಗಾಗಿ ಅಲೆಯದೆ ತೋಟಗಾರಿಕೆ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಪ್ರಶಸ್ತಿ ಪುರಸ್ಕೃತ ರೈತರು ತಮ್ಮ ಯಶೋಗಾಥೆ ಬಿಚ್ಚಿಟ್ಟರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿದ್ಯಾಧರ, ಪ್ರಗತಿಪರ ರೈತ ವಿರೂಪಾಕ್ಷಪ್ಪ ಬಿಸನಳ್ಳಿ ಮಾತನಾಡಿದರು. ಹನುಮಂತಪ್ಪ, ಖಾಸಿಂಅಲಿ ವಾಲೀಕಾರ, ಡಾ.ರವಿಕುಮಾರ ಇದ್ದರು. ಡಾ.ಡಿ.ಪಿ.ಪ್ರಕಾಶ್‌ ನಿರೂಪಿಸಿ, ಡಾ.ಎನ್‌.ಜಗದೀಶ್‌ ಸ್ವಾಗತಿಸಿದರು. ಡಾ.ಯೋಗೇಶಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.