ADVERTISEMENT

ಮೇಲ್ನೋಟಕ್ಕೆ ಸಾಬೀತು: ಡಿವೈಎಸ್ಪಿ

ಸಿಬಿಎಸ್‌ ಬ್ಯಾಂಕಿನ ಅವ್ಯವಹಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:50 IST
Last Updated 13 ಡಿಸೆಂಬರ್ 2013, 7:50 IST

ಗಂಗಾವತಿ: ನಗರದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಚನ್ನಬಸವ ಸ್ವಾಮಿ ಬ್ಯಾಂಕ್‌ (ಸಿಬಿಎಸ್‌)ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತನಿಖಾಧಿಕಾರಿ ಡಿವೈಎಸ್ಪಿ ವಿನ್ಸಂಟ್‌ ಶಾತಕುಮಾರ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಅವರು, ವಕೀಲ ಎಚ್‌. ಮಹಾಬಳೇಶ್ವರ ದಾಖಲಿಸಿದ ದೂರಿನ ಮೇರೆಗೆ ತನಿಖೆ ಆರಂಭವಾಗಿದೆ. ದೂರಿನಲ್ಲಿ ಆರೋಪಿಸಿದಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ  ಸಂಸದ ಶಿವರಾಮಗೌಡರಿಗೆ ಸಂಬಂಧವಿದೆಯೇ ಎಂಬುವುದು ಇನ್ನಷ್ಟು ತನಿಖೆಯಿಂದ ಗೊತ್ತಾಗಲಿದೆ ಎಂದರು.

ಆದರೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಸೂಚನೆಗಳನ್ನು ಮೀರಿ ಸಂಸ್ಥೆಯಿಂದ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದದ್ದು, ಆ ಬಗ್ಗೆ ಸಂಸ್ಥೆಯ ಸಿಇಒ ಜಿಲ್ಲಾಧಿಕಾರಿಯ ಗಮನಕ್ಕೆ ತಾರದಿರುವುದು ಸ್ಪಷ್ಟವಾಗಿದೆ ಎಂದರು. ಅಲ್ಲದೆ ಹಣಕಾಸು ಸಂಸ್ಥೆಯ ನಿಯಾಮವಳಿ ಮೀರಿ ಸಾಲಕ್ಕೆ ಸಾಕಷ್ಟು ಸೂಕ್ತ ಭದ್ರತೆ ಇಲ್ಲದೆ ವ್ಯಕ್ತಿಗಳಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಲಾಗಿದೆ. ಸಾಲಕ್ಕೆ ಕೆಲ ಗಣ್ಯರು ಶಿಫಾರಸು ಮಾಡಿರುವುದು ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ.

‘ಸಾಲ ಪಡೆದ ವ್ಯಕ್ತಿಗಳು ಹಣವನ್ನು ನೇರವಾಗಿ ಪರಣ್ಣ ಮುನವಳ್ಳಿ ಹಾಗೂ ಹಾಲಿ ಸಂಸದ ಶಿವರಾಮಗೌಡರಿಗೆ ನೀಡಿದ್ದಾರೆ. ಅವರು ಹಣವನ್ನು ಚುನಾವಣಾ ಅಕ್ರಮಕ್ಕೆ ಬಳಸಿಕೊಂಡಿದ್ದಾರೆ’ ಎಂಬ ಆರೋಪವನ್ನು ವಕೀಲ ಮಾಹಬಳೇಶ್ವರ ದೂರಿನಲ್ಲಿ ದಾಖಲಿಸಿದ್ದಾರೆ.

ಆರೋಪಕ್ಕೆ ಸೂಕ್ತ ಪುರಾವೆಗಳಿಲ್ಲ. ಹಣ ನೀಡಿದ ಸಾಕ್ಷಿಯಿಲ್ಲ. ಭದ್ರತೆಯಿಲ್ಲದೆ ಯಾವ ಮಾನದಂಡದ ಮೇಲೆ ಹಣ ನೀಡಲಾಗಿದೆ. ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದ ಹಣಕಾಸಿನ ವ್ಯವಹಾರ ಜಿಲ್ಲಾಧಿಕಾರಿ ಗಮನಕ್ಕೆ ಏಕೆ ತರಲಿಲ್ಲ ಎಂಬುವುದರ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಡಿವೈಎಸ್ಪಿ ಶಾಂತಕುಮಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.