ಕಾರಟಗಿ: ಪಡಿತರ ಅಕ್ಕಿಯನ್ನು ಕೊಪ್ಪಳ ಗವಿಮಠದ ಹೆಸರಲ್ಲಿ ದುರ್ಬಳಕೆ ಮಾಡಿಕೊಂಡಿದ್ದ ಕಾರಣ, ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕಿ ಸಿ. ಡಿ. ಗೀತಾ ಯರಡೋಣದಲ್ಲಿ ಸಾರ್ವಜನಿಕರೊಂದಿಗೆ ಸೋಮವಾರ ಸಭೆ ನಡೆಸಿದರು.
ಪಡಿತರ ಅಕ್ಕಿಯನ್ನು ಮಠಕ್ಕೆ ನೀಡಿಲ್ಲ. ಆಧಾರ್ ಸಂಖ್ಯೆ ಜೋಡಣೆ ಕಾರಣದಿಂದ ಪಡಿತರ ಕಡಿಮೆ ಬಂದಿತ್ತು. ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಗೈರು ಇದ್ದು, ಅವರನ್ನು ಕೊಪ್ಪಳಕ್ಕೆ ಕರೆಸಿಕೊಂಡು ವಿಚಾರಣೆ ಮಾಡುವುದಾಗಿ ಭರವಸೆ ನೀಡಿದರು.
ಘಟನೆಯ ವಿವರ: ಸಮೀಪದ ಯರಡೋಣ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಜನವರಿಯಲ್ಲಿ ಬರಬೇಕಿದ್ದ ಪಡಿತರ ಅಕ್ಕಿಯಲ್ಲಿ 30 ಕ್ವಿಂಟಲ್ ಕಡಿಮೆ ಬಂದಿತ್ತು.
ಕಾರ್ಯದರ್ಶಿ ಎಂ. ಎನ್. ವೀರೇಶಯ್ಯ ಗವಿಮಠದ ಜಾತ್ರೆಗೆ ಅಕ್ಕಿ ನೀಡಿದ್ದರಿಂದ ಕಡಿಮೆ ಬಂದಿದೆ ಎಂದು ಆಹಾರ ನಿರೀಕ್ಷಕರು ಹೇಳಿದ್ದಾರೆ ಎಂದು ತಿಳಿಸಿದ್ದರು.
ಸೋಮಶೇಖರಗೌಡ ಎಂಬುವವರು ಕೊಪ್ಪಳ ಗವಿಮಠಕ್ಕೆ ಸಂಪರ್ಕಿಸಿದಾಗ ಪಡಿತರ ಧಾನ್ಯ ಮಠಕ್ಕೆ ಪಡೆಯುವುದೇ ಇಲ್ಲ ಎಂದು ಸ್ಪಷ್ಟನೆ ದೊರಕಿತ್ತು. ಸತ್ಯಾಸತ್ಯತೆ ಬಯಲಾಗಲೆಂದು ಆಹಾರ ನಿರೀಕ್ಷಕ ಎಚ್. ಐ. ಬಗಲಿಗೆ ಒತ್ತಾಯಿಸಿದ್ದರು. ಬಗಲಿ ಜ. 30ರಂದು ಸಭೆ ನಡೆಸಿದಾಗ ಸಾರ್ವಜನಿಕರೆದುರೇ ಅಧಿಕಾರಿಗಳು ಪರಸ್ಪರ ಆರೋಪ ಮಾಡಿದ್ದರು.
ಗ್ರಾಮಸ್ಥರು ಇಬ್ಬರೂ ಅರೋಪಿತರೇ, ಜಿಲ್ಲಾ ಮಟ್ಟದ ಅಧಿಕಾರಿ ಫೆ.7ರೊಳಗೆ ತನಿಖೆ ನಡೆಸಲು ಎಂದು ಗಡುವು ನೀಡಿದ್ದರು. ಹೀಗಾಘಿ ಜಿಲ್ಲಾ ಉಪನಿರ್ದೇಶಕರು ಭೇಟಿ ನೀಡಿದ್ದರು. ಪ್ರಮುಖರಾದ ಸೋಮಶೇಖರಗೌಡ, ವೈ. ಜಗದೀಶಪ್ಪ, ಪ್ರಕಾಶಗೌಡ, ವಿಎಸ್ಎಸ್ಎನ್ ಅಧ್ಯಕ್ಷ ಪಿ. ವೀರೇಶ, ಗ್ರಾಮ ಪಂಚಾಯಿತಿ ಸದಸ್ಯೆ ದುರುಗಮ್ಮ, ಶರಣಮ್ಮ, ಶೇಖಶಾವಲಿಸಾಬ ಉಪಸ್ಥಿತರಿದ್ದರು.