ADVERTISEMENT

ರಾತ್ರೋರಾತ್ರಿ ಮಳಿಗೆ ನಿರ್ಮಾಣ: ಜಿಜ್ಞಾಸೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 7:00 IST
Last Updated 22 ಸೆಪ್ಟೆಂಬರ್ 2011, 7:00 IST

ಕುಷ್ಟಗಿ: ಇಲ್ಲಿಯ ತಾಲ್ಲೂಕು ಪಂಚಾಯಿತಿಗೆ ಸೇರಿದ, ಗಜೇಂದ್ರಗಡ ರಸ್ತೆಯಲ್ಲಿನ ಆವರಣಗೋಡೆಯನ್ನು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಲ್ಲದೇ ಕಾರ್ಯನಿರ್ವಾಹಕ ಅಧಿಕಾರಿಯ ಚೇಂಬರ್‌ಗೆ ಹೊಂದಿಕೊಂಡು ಅಕ್ರಮ ಮಳಿಗೆ ನಿರ್ಮಿಸಲಾಗಿದೆ.

ಆವರಣಗೋಡೆ ಕೆಡುವುದು, ಕಟ್ಟಡ ಸಾಮಗ್ರಿ ಸಂಗ್ರಹಿಸುವ ಪ್ರಕ್ರಿಯೆ ಮಂಗಳವಾರ ತಡರಾತ್ರಿ ನಡೆಸಲಾಗಿದ್ದು ಬೆಳಗಾಗುವುದರೊಳಗೆ ಹೊಸ ಮಳಿಗೆ ದಿಢಿ ೀರ್ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರಲ್ಲಿನ ಜಿಜ್ಞಾಸೆಗೆ ಕಾರಣವಾಗಿದೆ. ಅದರ ಪಕ್ಕದಲ್ಲಿ ಇನ್ನೂ ಒಂದು ಮಳಿಗೆ ನಿರ್ಮಾಣ ಮಾಡುವುದಕ್ಕೆ ಹೊಂಚು ಹಾಕಲಾಗಿದೆ ಎಂದು ಗೊತ್ತಾಗಿದೆ.

ಗಜೇಂದ್ರಗಡ ರಸ್ತೆಯಲ್ಲಿ ತಾಲ್ಲೂಕು ಪಂಚಾಯತಿ ಈ ಹಿಂದೆ ಅಭಿವೃದ್ಧಿ ಅನುದಾನದಲ್ಲಿ ಅನೇಕ ಮಳಿಗೆಗಳನ್ನು ನಿರ್ಮಿಸಿದೆ. ಇನ್ನೂ ಕೆಲವು ಮಳಿಗೆಗಳು ನಿರ್ಮಾಣಹಂತದಲ್ಲಿವೆ. ಆದರೆ ಯಾವುದೇ ಯೋಜನೆಯಲ್ಲಿಲ್ಲದ ಈ ಮಳಿಗೆ ನಿರ್ಮಾಗೊಂಡಿದ್ದು ಹೇಗೆ ಎಂಬುದು ತಿಳಿದಿಲ್ಲ.

ಈ ಮಳಿಗೆ ನಿರ್ಮಿಸಿದವರ‌್ಯಾರು? ಆವರಣಗೋಡೆ ಧ್ವಂಸಗೊಳಿಸಲು ಸೂಚಿಸಿದವರು ಯಾರು ಮತ್ತು ರಾತ್ರಿವೇಳೆ ನಿರ್ಮಿಸುವಂಥ ಅನಿವಾರ್ಯತೆ ಏನಿತ್ತು ಎಂಬ ಯಾವುದೇ ಮಾಹಿತಿ ತಾ.ಪಂ ಸಿಬ್ಬಂದಿ ಬಳಿ ಇರಲಿಲ್ಲ. `ಅಲ್ಲಿ ಮಳಿಗೆ ನಿರ್ಮಾಣವಾಗಿದ್ದೇ ಗೊತ್ತಿಲ್ಲ, ಯಾರು ಎಂಬುದೂ ತಿಳಿದಿಲ್ಲ ಸಾಹೇಬರೊಂದಿಗೆ ಚರ್ಚಿಸಿ ನಂತರ ಮಾಹಿತಿ ನೀಡುತ್ತೇನೆ~ ಎಂದು ಮಳಿಗೆಗಳಿಗೆ ಸಂಬಂಧಿಸಿದ ಶಾಖೆ ನಿರ್ವಹಿಸುತ್ತಿರುವ ಸಿ.ಆರ್.ವನಕಿ ಎಂಬುವವರು ಹೇಳಿದರಾದರೂ ನಂತರ ಮಾಹಿತಿ ನೀಡಲಿಲ್ಲ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚೇಂಬರ್‌ಗೆ ಹೊಂದಿಕೊಂಡ ಕಿಟಿಕಿಯನ್ನು ಮುಚ್ಚಿ ಆವರಣ ಗೋಡೆಯನ್ನು ಒಡೆದು ಮಳಿಗೆ ನಿರ್ಮಿಸಿರುವುದು ಅಚ್ಚರಿ ಮೂಡಿಸಿದ್ದು ಈ ಬಗೆಗಿನ ವಿವರ ಪಡೆಯುವುದಕ್ಕೆಂದೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ ಚವ್ಹಾಣ ಅವರನ್ನು ಅನೇಕ ಬಾರಿ ಸಂಪರ್ಕಿಸಲು ಯತ್ನಿಸಲಾಯಿತು. ಆದರೆ ಮೊಬೈಲ್ ರಿಂಗಣಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT