ADVERTISEMENT

ರೈತರಿಗೆ ನ್ಯಾಯ ಕೊಡಿ: ದೊಡ್ಡನಗೌಡ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 8:30 IST
Last Updated 14 ಜೂನ್ 2013, 8:30 IST

ಕುಷ್ಟಗಿ: ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಬಿತ್ತಿ, ಬೆಳೆದು ಕೃಷಿ ಉತ್ಪನ್ನದ ಮಾರಾಟಕ್ಕೆ ಪ್ರಾಂಗಣಕ್ಕೆ ಬರುವ ರೈತರಿಗೆ ಎಲ್ಲ ರೀತಿಯ ನ್ಯಾಯ ಒದಗಿಸಿಕೊಡುವುದು ಅಗತ್ಯವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ನುಡಿದರು.

ಎಪಿಎಂಸಿ ಕಚೇರಿ ಆವರಣದಲ್ಲಿ ಗುರುವಾರ ಶರಣಬಸವೇಶ್ವರ ವರ್ತಕರ ಸಂಘ, ಗಜಾನನ ಖರೀದಿದಾರರ ಸಂಘ, ಚಾಮುಂಡೇಶ್ವರಿ ಶ್ರಮಿಕರ ಸಂಘ ಮತ್ತು ಲಾರಿ ಮಾಲೀಕರ ಸಂಘ ಹಮ್ಮಿ ಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಅನೇಕ ಮೂಲ ಸೌಲಭ್ಯಗಳ ಕೊರತೆ ಇರುವುದು ಗಮನಕ್ಕೆ ಬಂದಿದ್ದು ಸರ್ಕಾರದಿಂದ ದೊರೆಯುವ ಎಲ್ಲ ನೆರವು ನೀಡುವುದಾಗಿ ತಿಳಿಸಿದರು. ಅಲ್ಲದೇ ತಮ್ಮ ಅಧಿಕಾರದ ಅವಧಿಯಲ್ಲಿ ಪ್ರಾಂಗಣದಲ್ಲಿ ನೀರು, ಉತ್ತಮ ರಸ್ತೆ, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸುವ ಸಂಬಂಧ ಸಮಿತಿಯ ಆಡಳಿತ ಮಂಡಳಿಯೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.

ಬಹು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಸಮಿತಿ ಪ್ರಾಂಗಣದಲ್ಲಿನ ನಿವೇಶನ ಹಂಚಿಕೆ ವಿಷಯದಲ್ಲಿ ಮುತುವರ್ಜಿ ವಹಿಸುತ್ತೇನೆ, ಬೇರೆ ಬೇರೆ ಕಾರಣಗಳಿಂದಾಗಿ ವಿಳಂಬಗೊಂಡಿರುವ ಈ ಪ್ರಕ್ರಿಯೆಗೆ ಎದುರಾಗಿರುವ ಅಡ್ಡಿ ಆತಂಕಗಳನ್ನು ನಿವಾರಿಸಿ ಸಣ್ಣ ವ್ಯಾಪಾರಿಗಳಿಗೆ ನಿವೇಶನ ಹಂಚಿಕೆ ಮಾಡಬೇಕಿದ್ದು ಈ ಕುರಿತು ಸಮಿತಿ ನಿರ್ದೇಶಕರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಸಮಿತಿ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ಬಸಣ್ಣ ಗೋನಾಳ, ಶಶಿಧರ ಕವಲಿ, ಲಾಡಸಾಬ್ ಕೊಳ್ಳಿ, ಲಾಡ್ಲೆಮಷಾಕ್ ಯಲಬುರ್ಗಿ ಇತರರು ಮಾತನಾಡಿದರು. ಗಂಜ ವರ್ತಕರ ಸಂಘದ ಅಧ್ಯಕ್ಷ ಚನ್ನಪ್ಪ ಚಟ್ಟೇರ, ಎಪಿಎಂಸಿ ಕಾರ್ಯದರ್ಶಿ ಎ.ಬಿ.ಪಾಟೀಲ ಇತರರು ಉಪಸ್ಥಿತರಿದ್ದರು. ಪ್ರಾಂಗಣದಲ್ಲಿನ ಎಲ್ಲ ವರ್ತರಕು ಭಾಗವಹಿಸಿದ್ದರು. ಸಂಗಮೇಶ ನಿರೂಪಿಸಿದರು.

ಅಸಮಾಧಾನ: ಎಪಿಎಂಸಿ ಕಚೇರಿಯಲ್ಲಿಯೇ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಸಮಿತಿ ಅಧ್ಯಕ್ಷ ಹಾಗೂ ಎಲ್ಲ ನಿರ್ದೇಶಕರ ಗೈರು ಹಾಜರಿ ಎದ್ದುಕಂಡಿತು. ಈ ಕುರಿತು ತಮ್ಮ ಭಾಷಣದಲ್ಲೇ ಅಸಮಾಧಾನ ಹೊರಹಾಕಿದ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ಇಲ್ಲಿಯೂ ರಾಜಕಾರಣ ನಡೆದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.